ಡಿಕೆಶಿ ಗೂಂಡಾ ರಾಜಕಾರಣ: ಶೋಭಾ ಕರಂದ್ಲಾಜೆ ಸಿಡಿಮಿಡಿ

Team Newsnap
2 Min Read

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರದ್ದು ಯಾವಾಗಲೂ ಗೂಂಡಾ ರಾಜಕಾರಣ. ಆರ್​ ಆರ್​ ನಗರ ಚುನಾವಣೆಯಲ್ಲೂ ಗೂಂಡಾಗಿರಿ ಮೂಲಕ ಗೆಲ್ಲುವ  ಪ್ರಯತ್ನ ನಡೆಸಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಿಡಿಮಿಡಿಗೊಂಡು ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ,
ಆರ್ ಆರ್​ ನಗರದಲ್ಲಿ ಡಿಕೆ ಶಿವಕುಮಾರ್, ಸಹೋದರ ಡಿ ಕೆ ಸುರೇಶ್ ಅವರುಗಳು ಎಲ್ಲಾ ಗೂಂಡಾಗಳನ್ನು ಬಳಸಿಕೊಂಡು ಕಾನೂನು ವ್ಯವಸ್ಥೆಯನ್ನು ಹದಗೆಡಿಸಲು ಯತ್ನಿಸುತ್ತಿದ್ದಾರೆ. ಈ‌ ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ ಎಂದರು.

ಕಾಂಗ್ರೆಸ್​ನವರು ಎಲ್ಲಾ ಸಂದರ್ಭದಲ್ಲೂ ಗುದ್ದಾಟ ಮಾಡ್ತಾರೆ. ಈಗ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕಾಗಿ ಗುದ್ದಾಟ ನಡೆಸ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗಲೂ, ಇಲ್ಲದಿರುವಾಗಲೂ ಕಾಂಗ್ರೆಸ್ ನಾಯಕರು ಗುದ್ದಾಟ ನಡೆಸ್ತಾರೆ. ಇದು ಕಾಂಗ್ರೆಸ್ ಉಳಿವಿಗಾಗಿ ನಡೆಯುತ್ತಿರುವ ಚುನಾವಣೆ. ಹಾಗಾಗಿ ಅವರ ಗುದ್ದಾಟ ಬಿಜೆಪಿಗೆ ಏನು ಎಫೆಕ್ಟ್ ಆಗಲ್ಲ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಚಿತ ಕೊರೋನಾ ಲಸಿಕೆ ನೀಡುವ ಬಿಜೆಪಿ‌ ಚುನಾವಣಾ ಪ್ರಣಾಳಿಕೆ ವಿಚಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ‌ಯನ್ನು ಶೋಭಾ ಕರಂದ್ಲಾಜೆ ಸಮರ್ಥಿಸಿಕೊಂಡು ನಮ್ಮದೇ ಸರ್ಕಾರ ಇದೆ, ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡುವುದು ನಮ್ಮ ಗುರಿ. ಇದಕ್ಕಾಗಿ ಸರ್ಕಾರ ಹಣ ಖರ್ಚು ಮಾಡುತ್ತಿದೆ. ಹೀಗಾಗಿಯೇ ಉಚಿತವಾಗಿ ಕೊಡುತ್ತೇವೆ ಎನ್ನುವುದರಲ್ಲಿ ತಪ್ಪಿಲ್ಲ. ಆದಷ್ಟು ಬೇಗ ರಾಜ್ಯದ ಜನರಿಗೆ ಕೊರೋನಾ ಲಸಿಕೆ ಸಿಗಲಿದೆ ಎಂದರು.

ಇನ್ನು, ಪ್ರತೀವರ್ಷದಂತೆ ಈ ಬಾರಿಯೂ ಸಹ ಸಂಸದೆ ಶೋಭಾ ಕರಂದ್ಲಾಜೆ ದಸರಾ ಗಜಪಡೆಯ ಮಾವುತರು ಹಾಗೂ ಕಾವಾಡಿಗರಿಗೆ ಉಪಾಹಾರ ವ್ಯವಸ್ಥೆ ಮಾಡಿದರು. ಶೋಭಾ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಮಾವುತರು ಹಾಗೂ ಕಾವಾಡಿಗರಿಗೆ ಉಪಹಾರದ ವ್ಯವಸ್ಥೆ ಮಾಡುತ್ತಿದ್ದರು. ಕೊರೋನಾ ಸಂದರ್ಭದಲ್ಲೂ ಸಂಸದೆ ಮಾವುತರು, ಕಾವಾಡಿಗಳನ್ನು ಮರೆತಿಲ್ಲ. ಮೈಸೂರಿನ ಅಂಬಾ ವಿಲಾಸ ಅರಮನೆಯಂಗಳದಲ್ಲಿ ಮಾವುತರು, ಕಾವಾಡಿಗರು ವಾಸ್ತವ್ಯ ಹೂಡಿದ್ದಾರೆ.

ಇಡ್ಲಿ, ದೋಸೆ, ಪೊಂಗಲ್, ವಡೆ, ಕಾಯಿ ಒಬ್ಬಟ್ಟು, ಪಲ್ಯ ಸೇರಿದಂತೆ ಹಲವು ಉಪಹಾರಗಳನ್ನು ಸಿದ್ದಪಡಿಸಲಾಗಿದೆ. ಮಾವುತರು, ಕಾವಾಡಿಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರೇ ಉಪಹಾರ ಬಡಿಸಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆಯಾಗಿದ್ದಾಗಿನಿಂದಲೂ ಮಾವುತರು, ಕಾವಾಡಿಗಳ ಬಗ್ಗೆ ಕಾಳಜಿ ಮುಂದುವರೆಸಿಕೊಂಡು ಬಂದಿದ್ದಾರೆ.

Share This Article
Leave a comment