ಇಷ್ಟು ದಿನ ಪಕ್ಷದ ಮುಖಂಡರಿಗೆ ಚುನಾವಣೆ ಜವಾಬ್ದಾರಿ ವಹಿಸುತ್ತಿದ್ದೆ. ಆದರೆ ಈಗ ರಾಮನಗರ ಕ್ಷೇತ್ರದ ಮೇಲೆ ಕಾಂಗ್ರೆಸ್ ನವರ ಕ್ರೂರ ಹಾಗೂ ವಕ್ರದ್ಱಷ್ಟಿ ಬಿದ್ದಿದೆ. ನಾನು ಕಳೆದ 20 ವರ್ಷದಿಂದ ಶಾಂತಿಯುತ ರಾಜಕೀಯ ಮಾಡಿದ್ದೇನೆ, ಹಾಗಾಗಿ ರಾಮನಗರದಲ್ಲಿ ಯಾವುದೇ ತೊಂದರೆಯಾಗಬಾರದೆಂದು ನಾನೇ ಬಂದಿದ್ದೇನೆಂದು ಟಾಂಗ್ ಕೊಟ್ಟರು.
ಈ ಬಾರಿಯ ಚುನಾವಣೆಯ ತಯಾರಿ ಬಗ್ಗೆ ಕುಮಾರಸ್ವಾಮಿ ಚರ್ಚೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್ಡಿಕೆ, ರಾಜ್ಯದ 8 ನಗರಸಭೆಗೆ ಚುನಾವಣೆ ಘೋಷಣೆಯಾಗಿದೆ. ಹಾಗಾಗಿ ಇವತ್ತು ರಾಮನಗರದಲ್ಲಿ ಮುಸ್ಲಿಂ ಸಮುದಾಯದ ಸಭೆ ಮಾಡಿದ್ದೇನೆ. ಎಂದರು.
ಸ್ಲಂ ಬೋರ್ಡ್ ವತಿಯಿಂದ ಬಡವರಿಗೆ ಮನೆಗಳ ಹಂಚಿಕೆ ವಿಚಾರದಲ್ಲಿ ನನ್ನ ತಪ್ಪಿಲ್ಲ, ಜನರು ಕಟ್ಟಿರುವ 5 ಸಾವಿರ ರೂಪಾಯಿ ಎಲ್ಲೂ ಹೋಗಿಲ್ಲ, ಸ್ಲಂ ಬೋರ್ಡ್ ನಲ್ಲಿದೆ. ಆದರೆ ಕೆಲವರು ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ. ಕಾಂಗ್ರೆಸ್ – ಬಿಜೆಪಿ ಕಾಲದಲ್ಲಿ ಕೆಲ ಸಮಸ್ಯೆ ಇತ್ತು. ಆದರೆ ನಾನು ಸಿಎಂ ಆದ ನಂತರ 58 ಕೋಟಿ ರು ಹಣ ಮೀಸಲಿಡಲಾಗಿದೆ. ಯಾರಿಗೂ ಆತಂಕ ಬೇಡ, ಅರ್ಹರಿಗೆ ಮನೆ ಸಿಗಲಿದೆ ಎಂದು ಹೇಳಿದರು.
ಕೆಲವರು ಇದರಲ್ಲೇ ರಾಜಕೀಯ ಮಾಡ್ತಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿ ಮಾಡಿ ಪ್ರಸ್ತಾಪ ಮಾಡ್ತಾರೆ. ಇಲ್ಲಿನ ಮಾಜಿ ಶಾಸಕರು ಏನ್ ಕಿತ್ತು ಗುಡ್ಡೆ ಹಾಕಿದ್ದಾರೆ ಎಲ್ಲರಿಗೂ ಗೊತ್ತಿದೆ ಎಂದು ಹೆಸರು ಪ್ರಸ್ತಾಪಿಸದೇ ಕಾಂಗ್ರೆಸ್ ಮುಖಂಡ ಸಿ.ಎಂ.ಲಿಂಗಪ್ಪಗೆ ಟಾಂಗ್ ಕೊಟ್ಟರು.
ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸಹ ಭಾಗಿಯಾಗಿದ್ದರು.