ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣದಲ್ಲಿ ಮೈಸೂರಿಗೆ ಕಳಂಕ ತರುವ ಆರೋಪ ಮಾಡಿದವರು ಮೈಸೂರು ಜಿಲ್ಲೆಯ ಜನತೆಯ ಬಳಿ ಕ್ಷಮೆ ಕೇಳಬೇಕು ಎಂದು ಚಾಮರಾಜ ನಗರ ಡಿಸಿ ಎಂ ಆರ್ ರವಿ ಗೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಟಾಂಗ್ ನೀಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ರೋಹಿಣಿ, ಉಚ್ಚ ನ್ಯಾಯಾಲಯ ನೀಡಿರುವ ವರದಿ ಈಗಾಗಲೇ ಬಹಿರಂಗವಾಗಿದೆ. ನಾನು ಮೈಸೂರು ಜಿಲ್ಲಾಧಿಕಾರಿಯಾಗಿ ಬಂದ ದಿನದಿಂದ ಕೆಲವೊಬ್ಬರು ಇಲ್ಲ ಸಲ್ಲದ ಆರೋಪ ಮಾಡುತ್ತಾ ಬಂದಿದ್ದಾರೆ. ಇದಕ್ಕೆಲ್ಲಾ ನಾನು ಪ್ರತಿಕ್ರಿಯೆ ನೀಡಿಲ್ಲ. ನೀಡುವುದೂ ಇಲ್ಲ ಎಂದರು.
ಚಾಮರಾಜನಗರ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಮಾಡಲು ಹೋಗಿ ಇಡೀ ಮೈಸೂರು ಜಿಲ್ಲೆಯ ಜನತೆಗೆ ಕಳಂಕ ತರುವ ಪ್ರಯತ್ನ ನಡೆದಿತ್ತು. ಜೊತೆಗೆ ಕೆಲವರು ವೈಯಕ್ತಿಕವಾಗಿ ಸಹ ಆರೋಪ ಮಾಡಿದ್ದರು. ಆದರೆ ಮೈಸೂರು ಜಿಲ್ಲೆಯವರು ಈ ಕಳಂಕದಿಂದ ಹೊರ ಬಂದಿದ್ದೇವೆ. ನಾವು ಈ ಹುದ್ದೆಗೆ ಬಂದಿರುವುದು ದೇಶ ಸೇವೆ ಮಾಡುವ ಸಲುವಾಗಿ ಎಂದರು.