ಪಾದಾಚಾರಿಗೆ ಕಾರು ಡಿಕ್ಕಿ ಹೊಡೆದ ನಂತರ ಅಡಿಕೆ ತೋಟದೊಳಗೆ ನುಗ್ಗಿದೆ.ಈ ಘಟನೆಯ ಪಾದಾಚಾರಿ ಸ್ಥಳದಲ್ಲೇ ಸಾವನ್ನಪ್ಪಿದರು.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಿರಬೆಳಗುಲಿ ಗ್ರಾಮ ಸಮೀಪದ ತಿರುವಿನಲ್ಲಿ ನಡೆದಿದೆ.
ಹಿರೆಬೆಳಗುಲಿ ಗ್ರಾಮದ ರಾಮಸ್ವಾಮಿ (76) ಮೃತ ವ್ಯಕ್ತಿ.
ರಾಮಸ್ವಾಮಿ ಹೊಳೆನರಸೀಪುರ ಪಟ್ಟಣಕ್ಕೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಹಾಸನದ ಕಡೆಯಿಂದ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಅಡಿಕೆ ತೋಟದ ಒಳಗೆ ನುಗ್ಗಿ ನಿಂತಿದೆ.
ಮೃತ ವ್ಯಕ್ತಿಯು ಎರಡು ದಿನಗಳ ಹಿಂದೆ ನೂತನ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು.
ಮೃತ ವ್ಯಕ್ತಿಯ ಪುತ್ರನೊಬ್ಬ ಭಾರತೀಯ ಸೈನ್ಯದಲ್ಲಿ ಯೋಧನಾಗಿದ್ದಾರೆ. ಕೆಲವು ದಿನಗಳ ಹಿಂದೆ ರಜೆ ಪಡೆದು ಕುಟುಂಬ ಸದಸ್ಯರ ಜೊತೆಯಲ್ಲಿ ಇರಲು ಬಂದಿದ್ದರು.
ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.