Categories: Main News

ಆಷಾಢಮಾಸ ಆರಂಭ: ಅಳುಕೇಕೆ , ಆತಂಕವೇಕೆ ?

ಕೆಲವರಿಗೆ ಆಷಾಢ ಎಂದರೆ ಅಳುಕು. ಶುಭಕಾರ್ಯ ಮಾಡಲು ಆತಂಕ. ಆದರೆ ನಾವು ಅಂದುಕೊಂಡಂತೆ ಆಷಾಢ ಕೆಟ್ಟ ಮಾಸವೂ ಅಲ್ಲ, ನಮಗೆ ಕೇಡು ತರುವುದೂ ಇಲ್ಲ. ಕೇವಲ ವೈಜ್ಞಾನಿಕ ಕಾರಣಕ್ಕಾಗಿ ಈ ತಿಂಗಳಲ್ಲಿ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೇ ಹೊರತು ಬೇರಾವ ದುಷ್ಟ ಹಿನ್ನೆಲೆಯೂ ಇಲ್ಲ.


ಆಷಾಢ ಮಾಸ, ಸಾಧಕರಿಗೆ ಸದಾ ಸೋಪಾನವಾಗಿದೆಯೇ ವಿನಃ ಅಮಂಗಲ ಮಾಸವಲ್ಲ. ವರ್ಷದ 12 ಮಾಸಗಳಂತೆಯೇ ಇದು ಸಹ ಒಂದು ಮಾಸ. ಹುಣ್ಣಿಮೆಯಂದು ಪೂರ್ವಾಷಾಢ ನಕ್ಷತ್ರದೊಂದಿಗೆ ಚಂದ್ರಗ್ರಹ ಸಂಯೋಗಗೊಳ್ಳುವುದರಿಂದ ಆಷಾಢ ಮಾಸ ಎನ್ನಲಾಗುತ್ತದೆ. ಅದರ ಹೊರತಾಗಿ ಈ ತಿಂಗಳು ಅಶುಭವೇನಲ್ಲ. ಆದರೆ ಜನಮಾನಸದಲ್ಲಿ ಈ ತಿಂಗಳು ಅಶುಭ ಮಾಸ ಎನ್ನುವ ವಿಚಾರ ಆಳವಾಗಿ ಬೇರೂರಿದೆ.

ಕಾರಣವಿಷ್ಟೇ ಜನರ ಬಾಯಲ್ಲಿ ಒಳ್ಳೆಯ ವಿಚಾರ ಬೇಗ ಹರಡುವುದಿಲ್ಲ. ಆದರೆ ಕೆಟ್ಟ ವಿಚಾರ ಬೇಗ ಹರಡುತ್ತದೆ. ಹಾಗಾಗಿ ವೈಜ್ಞಾನಿಕ ಕಾರಣಕ್ಕೆ ಯಾರೋ ಪುಣ್ಯಾತ್ಮರು ಲೇಪಿಸಿದ ಕೆಟ್ಟ ಮಾಸ ಎಂಬ ಕಳಂಕ ಇಂದಿಗೂ ಚಾಲ್ತಿಯಲ್ಲಿದೆ.


ಈ ಮಾಸದಲ್ಲಿ ಶುಭಕಾರ್ಯ ಮಾಡದಿರಲು ಹಲವಾರು ಕಾರಣಗಳಿವೆ. ಅವುಗಳ ಬಗ್ಗೆ ಒಂದಿಷ್ಟು ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳನ್ನು ಅರಿಯೋಣ.


‌ಆಷಾಢಮಾಸ ಅಶುಭಮಾಸ ಎಂಬುದು ಜನರ ನಂಬಿಕೆ. ಆದರೆ ಈ ಮಾಸದಲ್ಲಿ ಕೆಲ ಕಾರಣಗಳಿಂದ ಶುಭಕಾರ್ಯ ಮಾಡಬಾರದು ಅಷ್ಟೇ. ಇದಕ್ಕಿರುವ ವೈಜ್ಞಾನಿಕ ಹಿನ್ನೆಲೆಯನ್ನು ತಿಳಿಯೋಣ. ಆದರೆ ಈ ಮಾಸ ಅಶುಭವಲ್ಲ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತಿದ್ದೇನೆ.


ಅಶ್ವಿನ್ಯಾದಿ ನಕ್ಷತ್ರಗಳ ಪೈಕಿ, ಅಶ್ವಿನಿ, ಕೃತ್ತಿಕಾ, ಮೃಗಶಿರ, ಪುಷ್ಯ, ಮಘ, ಉತ್ತರ ಫಲ್ಗುಣಿ, ಚಿತ್ತಾ, ವಿಶಾಖ, ಜ್ಯೇಷ್ಠ, ಪೂರ್ವಾಷಾಢ, ಶ್ರವಣ, ಪೂರ್ವಭಾದ್ರಪದ, ಈ 12 ನಕ್ಷತ್ರಗಳಲ್ಲಿ ಪ್ರತಿ ತಿಂಗಳು ಹುಣ್ಣಿಮೆಯಂದು ಚಂದ್ರ ಗ್ರಹದ ಜತೆ ಒಂದೊಂದು ನಕ್ಷತ್ರ ಮಿಳಿತಗೊಳ್ಳುತ್ತವೆ. ಹಾಗಾಗಿ ಆ ತಿಂಗಳನ್ನು ಆಯಾ ನಕ್ಷತ್ರದ ಹೆಸರಲ್ಲಿ ಕರೆಯಲಾಗುತ್ತದೆ.
ಉದಾಹರಣೆಗೆ, ಅಶ್ವಿನಿ ನಕ್ಷತ್ರದ ಜತೆ ಚಂದ್ರನಿದ್ದಾಗ ಆಶ್ವಯುಜ ಮಾಸ, ಕೃತ್ತಿಕಾ ಜತೆಯಿದ್ದಾಗ ಕಾರ್ತೀಕ ಮಾಸ, ಮೃಗಶಿರದ ಜತೆಯಿದ್ದಾಗ ಮಾರ್ಗಶಿರ ಮಾಸ, ಪುಷ್ಯದ ಜತೆಗಿದ್ದಾಗ ಪುಷ್ಯ ಮಾಸ, ಮಘ(ಮುಖೆ) ಜತೆಗಿದ್ದಾಗ ಮಾಘಮಾಸ, ಉತ್ತರಫಲ್ಗುನಿ ಜತೆಗಿದ್ದಾಗ ಫಾಲ್ಗುಣ ಮಾಸ, ಚಿತ್ತಾ ನಕ್ಷತ್ರದೊಂದಿಗಿದ್ದಾಗ ಚೈತ್ರಮಾಸ, ವಿಶಾಖದೊಂದಿಗಿದ್ದಾಗ ವೈಶಾಖ ಮಾಸ, ಜ್ಯೇಷ್ಠದೊಂದಿಗಿದ್ದಾಗ ಜ್ಯೇಷ್ಠ ಮಾಸ, ಪೂರ್ವಾಷಾಢದೊಂದಿಗೆ ಇದ್ದಾಗ ಆಷಾಢ ಮಾಸ, ಶ್ರವಣದೊಂದಿಗೆ ಇದ್ದಾಗ ಶ್ರಾವಣ ಮಾಸ, ಉತ್ತರ ಭಾದ್ರಪದದೊಂದಿಗೆ ಇದ್ದಾಗ ಭಾದ್ರಪದ ಮಾಸ ಎಂದು ಕರೆಯಲಾಗುತ್ತದೆ.


ಈ ತಿಂಗಳ ಹುಣ್ಣಿಮೆಯಂದು ಚಂದ್ರ ಗ್ರಹದ ಜತೆ ಪೂರ್ವಾಷಾಢ ನಕ್ಷತ್ರ ಮಿಳಿತಗೊಳ್ಳುತ್ತದೆ. ಹಾಗಾಗಿ ಈ ಮಾಸವನ್ನು ಆಷಾಢ ಮಾಸ ಎಂದು ಕರೆಯಲಾಗುತ್ತದೆ. ಸಹಜವಾಗಿ ಈ ತಿಂಗಳು ಅಶುಭ ಎಂಬ ಮಾತು ವಾಡಿಕೆಯಲ್ಲಿದೆ. ಆದರೆ ಇದು ಅಶುಭ ಮಾಸ ಎಂಬುದು ಯಾವ ಶಾಸ್ತ್ರದಲ್ಲೂ ಉಲ್ಲೇಖವಿಲ್ಲ.


ಈ ತಿಂಗಳಲ್ಲಿ ಮಾಡುವ ಶುಭಕರ ಕೆಲಸಗಳು ಫಲ ನೀಡುವುದಿಲ್ಲ ಎಂಬ ಮಾತು ಜನ ಜನಿತವಾಗಿದೆ. ಆದರೆ ಈ ತಿಂಗಳಲ್ಲಿ ಶುಭಕಾರ್ಯ ಮಾಡದಿರಲು ಸಾಮಾಜಿಕ ಕಳಕಳಿಯಿಂದ ಕೂಡಿದ ವೈಜ್ಞಾನಿಕ ಕಾರಣವಿದೆಯೇ ಹೊರತು ಧಾರ್ಮಿಕ ಕಾರಣವಿಲ್ಲ.


ಆಷಾಢ ಮಾಸದಲ್ಲಿ ಮದುವೆ, ಗೃಹಪ್ರವೇಶ, ಉಪನಯನ, ವಾಹನ ಖರೀದಿ, ಜಮೀನು ಖರೀದಿ, ಹೊಸದಾಗಿ ವ್ಯಾಪಾರ ಆರಂಭಿಸುವುದು ಮತ್ತಿತರ ಶುಭಕಾರ್ಯಗಳನ್ನು ಮಾಡುವಂತಿಲ್ಲ. ಇದಕ್ಕೆ ಮೂಲ ಕಾರಣ ದೇಶದ ಬೆನ್ನೆಲುಬಾದ ಕೃಷಿ ಚಟುವಟಿಕೆ ಹಾಗೂ ಜೋರು ಮಳೆ.


ಮುಂಗಾರು ಮಳೆ ಆರಂಭಗೊಂಡ ನಂತರ ಗ್ರೀಷ್ಮ ಋತುವಿನಲ್ಲಿ ಅಬ್ಬರಿಸಲು ಆರಂಭಿಸುತ್ತದೆ. ಗುಡುಗು, ಮಿಂಚು, ಸಿಡಿಲು, ಬಿರುಗಾಳಿಯ ಆರ್ಭಟವೇ ಹೆಚ್ಚು.ಶತಮಾನಗಳ ಹಿಂದೆ ಆಷಾಢ ಮಾಸದಲ್ಲಿ ಸುರಿಯುತ್ತಿದ್ದ ಜೋರು ಮಳೆಯಿಂದ ಜನ ಮನೆಯಿಂದ ಈಚೆ ಬರಲು ಸಾಧ್ಯವಾಗುತ್ತಿರಲಿಲ್ಲ. ಮನೆಯಿಂದ ಹೊರಗೆ ಹೋಗುವುದೇ ಬಹಳ ದುಸ್ತರವಾಗುತ್ತಿತ್ತು.


ಜತೆಗೆ ಈ ತಿಂಗಳಲ್ಲಿ ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಕೆಲಸದ ಜತೆ, ಕೃಷಿ ಚಟುವಟಿಕೆ ನಡೆಯುತ್ತದೆ. ಎಲ್ಲರು ಸಾಮಾನ್ಯವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಇಷ್ಟ ಮಿತ್ರರು, ಬಂಧುಗಳು ಶುಭಕಾರ್ಯದಲ್ಲಿ ಸೇರಲಾಗುತ್ತಿರಲಿಲ್ಲ. ಕುಟುಂಬ ಸಮೇತ ಶುಭಕಾರ್ಯದಲ್ಲಿ ಭಾಗಿಯಾಗಲು ಹಿಂದೆ ಇಂದಿನಂತೆ ಆಧುನಿಕ ವಾಹನಗಳ ಸೌಲಭ್ಯವಿರಲಿಲ್ಲ. ಸಿರಿವಂತರಾದರೆ ಕುದುರೆಗಾಡಿ ಪ್ರಯಾಣ, ಸಾಮಾನ್ಯರಾದರೆ ಎತ್ತಿನಗಾಡಿ ಪ್ರಯಾಣ, ಅದಿಲ್ಲದಿದ್ದರೆ ಕಾಲು ನಡಿಗೆ ಪ್ರಯಾಣವೇ ಮಾನವನಿಗೆ ಗತಿಯಾಗಿತ್ತು. ಜೋರು ಮಳೆಯಲ್ಲಿ ಹಳ‍್ಳಕೊಳ‍್ಳ ತುಂಬಿ ಹರಿಯುವಾಗ ಪ್ರಯಾಣ ಸುಲಭವಾಗಿರಲಿಲ್ಲ. ಬಂಧು ಬಳಗವಿಲ್ಲದೆ ಶುಭ ಕಾರ್ಯ ಅಸಾಧ‍್ಯ ಹಾಗಾಗಿ ಆಷಾಢ ಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲ. ಈ ಕಾರಣಗಳಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು. ಇದರ ಹೊರತಾಗಿ ಯಾವುದೇ ಧಾರ್ಮಿಕ ಕಾರಣವಿಲ್ಲ.


ಮತ್ತೊಂದು ಮಾತಿದೆ. ಹೊಸದಾಗಿ ಮದುವೆಯಾದ ಸೊಸೆ ಆಷಾಢಮಾಸದಲ್ಲಿ ಅತ್ತೆಯೊಂದಿಗೆ ಒಂದೇ ಮನೆಯಲ್ಲಿ ವಾಸಿಸಬಾರದು. ಇದು ಅಮಂಗಲ ಎಂಬ ಪ್ರತೀತಿ. ಆದರೆ ಇದು ಶುದ್ಧ ಸುಳ್ಳು.

ಈ ತಿಂಗಳಲ್ಲಿ ಕೃಷಿ ಚಟುವಟಿಕೆಗೆ ಆದ್ಯತೆ. ಕೆಲಸ ಮಾಡಬೇಕಾದ ಹುಡುಗ, ಮನೆಗೆ ಹೊಸದಾಗಿ ಬಂದ ಹೆಂಡತಿಯ ಮುಖ ಸೌಂದರ್ಯ ನೋಡುತ್ತಾ, ಸೀರೆ ಸೆರಗು (ಈ ತಿಂಗಳಲ್ಲಿ ಮಳೆಯಿಂದ ಚಳಿ ಹೆಚ್ಚಾಗುವ ಕಾರಣ ಪರಸ್ಪರ ಆಕರ್ಷಣೆ) ಹಿಡಿದುಕೊಂಡು ಓಡಾಡಿದರೆ ಕೆಲಸ ಮಾಡಲಾಗುವುದಿಲ್ಲ. ಕೃಷಿ ಚಟುವಟಿಕೆ ಕುಂಟಿತಗೊಳ್ಳುತ್ತದೆ. ಅಲ್ಲದೇ ನವ ದಂಪತಿ ಒಟ್ಟಾಗಿದ್ದರೆ, ಈ ತಿಂಗಳಲ್ಲಿ ನವವಧು ಗರ್ಭಧರಿಸಿದರೆ ಚೈತ್ರ ಅಥವಾ ವೈಶಾಖಮಾಸದಲ್ಲಿ ಮಗು ಜನನವಾಗುತ್ತದೆ. ವೈಶಾಖ ಮಾಸದಲ್ಲಿ ಬಿಸಿಲ ಬೇಗೆ ಹೆಚ್ಚಾಗುವುದರಿಂದ ಮಗುವಿಗೆ ತ್ರಾಸವಾಗುತ್ತದೆ. ಈ ಎಲ್ಲ ಕಾರಣಗಳಿಂದ ಆಷಾಢಮಾಸದಲ್ಲಿ ನೆಂಟರಿಷ್ಟರು ಸೇರಿ ಆಚರಿಸುವ ಕಾರ್ಯಕ್ರಮಗಳಿಗೆ ಬಿಡುವು ನೀಡಲಾಗಿದೆ. ಬದಲಿಗೆ ಕೃಷಿ ಚಟುವಟಿಕೆಗೆ ಆದ್ಯತೆ ನೀಡಲಾಗಿದೆಯಷ್ಟೇ.


ಈ ಮಾಸದಲ್ಲಿಯೇ ಪರಶಿವನು ತನ್ನ ಸತಿ ಪಾರ್ವತಿದೇವಿಗೆ ಗುಹೆಯಲ್ಲಿ ರಾಮಮಂತ್ರದ ಮಹಿಮೆ ಬೋಧಿಸಿದ. ಅನುಸೂಯಾ ದೇವಿ ಈ ತಿಂಗಳಲ್ಲಿ ಬರುವ ನಾಲ್ಕು ಸೋಮವಾರಗಳಂದು ರುದ್ರದೇವರ ಪೂಜೆ ಮಾಡಿದಳು. ವಿಶೇಷವಾಗಿ ಈ ತಿಂಗಳ ಶುಕ್ರವಾರಗಳಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ.ಇದನ್ನು ಓದಿ –ಮಾಜಿ ಸಚಿವ ನಾಗೇಂದ್ರ, ದದ್ದಲ್ ನಿವಾಸಗಳ ಮೇಲೆ ED ದಾಳಿ : ಬಂಧನ ಸಾಧ್ಯತೆ

ಹುಣ್ಣಿಮೆಯಂದು ಗುರುಪೂರ್ಣಿಮೆ, ಈ ದಿನ ಮಠಗಳಲ್ಲಿ ಯತಿಗಳು ಶ್ರೀವೇದವ್ಯಾಸ ದೇವರ ಪೂಜೆ ನಡೆಸಿ ಚಾತುರ್ಮಾಸ್ಯ ವ್ರತ ಆರಂಭಿಸುತ್ತಾರೆ. ಸುಮಂಗಲಿಯರು ದೀರ್ಘ ಸೌಮಾಂಗಲ್ಯ ಪಾಪ್ತಿಗಾಗಿ ಈ ತಿಂಗಳ ಅಮಾವಾಸ್ಯೆಯಂದು ಜ್ಯೋತಿರ್ಭೀಮೇಶ್ವರ ವ್ರತ ಆಚರಿಸುತ್ತಾರೆ. ಹಾಗಾಗಿ ಈ ಆಷಾಢಮಾಸವನ್ನು ನಿಷಿದ್ಧ ಮಾಸವೆಂದು ತಿರಸ್ಕರಿಸದೆ, ಆತ್ಮೋನ್ನತಿಗೆ ಮುಂದಾಗಬಹುದು. ವೈಜ್ಞಾನಿಕ ಕಾರಣಗಳಿಂದ ನಿಷಿದ್ಧವೇ ಹೊರತು ಧಾರ್ಮಿಕವಾಗಿ ನಿಷಿದ್ಧವಲ್ಲ.

ಶ್ರೀ ಸೋಮಸುಂದರ ಶಾಸ್ತ್ರೀ
ಪ್ರಧಾನ ಅರ್ಚಕರು ಮತ್ತು ಪುರೋಹಿತರು
ಶ್ರೀ ವಿದ್ಯಾ ಗಣಪತಿ ದೇವಸ್ಥಾನ
ಸಿರಾ, ತುಮಕೂರು
9632897701

Team Newsnap
Leave a Comment

Recent Posts

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ : ಸಿ.ಎಂ.ಸಿದ್ದರಾಮಯ್ಯ

ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More

September 21, 2024

10 ವರ್ಷದ ಬಾಲಕ ಹೃದಯಘಾತದಿಂದ ಸಾವು

ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್‌… Read More

September 21, 2024

ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು

ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More

September 21, 2024

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024