ಅಯೋಧ್ಯೆ – ಶ್ರೀ ರಾಮ ಕೇವಲ ಆ ಒಂದು ಕಾರಣಕ್ಕೆ ಮುಖ್ಯವಲ್ಲ.. ಮತ್ತೆ.. ? ಓದಿ ನೋಡಿ..

Team Newsnap
7 Min Read
WhatsApp Image 2024 01 22 at 6.14.57 AM
ಸಂತೋಷ್ ಮೆಹಂದಳೆ

ಬಹುಶ: ಅತಿ ಹೆಚ್ಚು ಬಾರಿ ಮಹಿಳಾವಾದಿಗಳಿಂದ ಟೀಕೆಗೊಳಗಾಗಿಯೂ, ಆದರೆ ಪ್ರತಿಬಾರಿ ಪ್ರತಿ ಹೆಣ್ಣೂ ಖಾಸಗಿಯಾಗಿ ” ತನ್ನ ಗಂಡನಾಗುವವನು ಮಾತ್ರ ಅವನಂತಿರಲೇ ಬೇಕು…” ಎಂದು ಬಯಸುವಷ್ಟರ ಮಟ್ಟಿಗೆ ದ್ವಂದ್ವ ನಿಲುವಿಗೆ ನಿಚ್ಚಳವಾಗಿ ಕಾರಣವಾಗುವಷ್ಟು, ಅವನಂತೆ ಈಡಾದವರು ಇನ್ನಾರೂ ಇರಲಿಕ್ಕಿಲ್ಲ.

ಪ್ರತಿ ಹೆಣ್ಣೂ ಇವತ್ತು ಜಾಗತಿಕವಾಗಿ ಗಂಡಸೊಬ್ಬ ಹೀಗಿರಬೇಕು ಎಂದು ನೋಡದೆಯೂ ಮನಸಾರೆ ಬಯಸಿದ ಕಥಾನಕವೇನಾದರೂ, ಪುರುಷನೊಬ್ಬನ ವ್ಯಕ್ತಿತ್ವವೇನಾದರೂ ಇದ್ದರೆ ಅದು ನಿಸ್ಸಂಶಯವಾಗಿ ಅವನದ್ದೆ. ಅವನು ರಾಮ… ಶ್ರೀರಾಮ.

ಹೆಣ್ಣಿಗಾಗಿ, ಹೆಣ್ಣಿನ ವ್ಯಕ್ತಿತ್ವದ ಉದಾಹರಣೆಗಾಗಿ ಭೂಮಂಡಲದಲ್ಲೆಲ್ಲಾ ನೂರಾರು ಆದರ್ಶ ಮಹಿಳೆಯರ ಹೆಸರುಗಳು ಲಭ್ಯವಿದ್ದರೆ ಪುರುಷರ ಹೆಸರಲ್ಲಿ ಇವತ್ತಿಗೂ ಶ್ರೀ ರಾಮನೇ ಅಜರಾಮರ. ಅವನ ಆ ಸರ್ವಗುಣ ಸಂಪನ್ನಕಾರಕ ಚಿತ್ರಣವನ್ನು ಮೀರಿಸುವ ಇನ್ನೊಂದು ವ್ಯಕ್ತಿತ್ವ ಉಧ್ಭವವಾಗಲೇ ಇಲ್ಲ. ಹಾಗಾಗುವುದಕ್ಕೆ ಸಾಧ್ಯವೂ ಇಲ್ಲ. ಕಾರಣ ಮನುಷ್ಯನಾದವನು ಹೇಗಿರಬೇಕು ಎನ್ನುವುದಕ್ಕೆ ಯಾವತ್ತಿಗೂ ಮುರಿಯದ ದಾಖಲೆಯಾಗಿ ಉಳಿದು ಹೋಗುವ ವ್ಯಕ್ತಿತ್ವವಾಗಿ ವಿಜೃಂಭಿಸಿದವನು ಅವನು.

ಅಜಾನುಬಾಹು ಅದರೆ ಅಷ್ಟೆ ಮಗುವಿನಂತಹ ವ್ಯಕ್ತಿತ್ವ (ಮೃದು ಪೂರ್ವಂಚ ಭಾಷಿತೆ), ವೀರಾಧಿವೀರ ಅದರೆ ನಿಗರ್ವಿ, ಅಜಾತ ಶತ್ರು ಆದರೆ ದುರಾಸೆಯಿಂದ ಮುಕ್ತ, ಸುಂದರ ಆದರೆ ಯಾವತ್ತೂ ಧಿಮಾಕು ತೋರಿದವನಲ್ಲ(ರಮಯತೇ ಇತಿ: ರಾಮ:), ಅನಾಹುತಕಾರಿ ಬಾಹುಬಲವಿದ್ದರೂ ಅಧ್ಬುತ ಸಂಯಮಿ(ಚಿತೈತಿ ಗಂಭೀರತ:), ಯಾವ ಯುದ್ಧವನ್ನೂ ಮಾಡಿದರೂ ಅಧರ್ಮದ ದಾರಿ ಹಿಡಿಯದ(ಧರ್ಮೇ ತತ್ಪರತ:), ಭೂಮಂಡಲ ಆಧಿಪತ್ಯವಿದ್ದರೂ ಯಾವತ್ತೂ ಸ್ವಾರ್ಥಿಯಾಗದವ, ಜಗದೇಕ ಸುಂದರಿಯರು ಹೆಜ್ಜೆ ಹೆಜ್ಜೆಗೆ ಅವನನ್ನು ಬದುಕಿನುದ್ದಕ್ಕೂ ಎಡತಾಕಿರಬಹುದು ಆದರೆ ಅವನಿಗೆ ಮಾತ್ರ ಹೆಣ್ಣೆಂದರೆ ದಿವ್ಯ ಗೌರವ, ಉದ್ದಗಲಕ್ಕೂ ಸುರಿದ ಆಸ್ತಿ ಅಂತಸ್ತುಗಳಿದ್ದರೂ ಅವನನ್ನು ಎಲ್ಲರೂ ಇವತ್ತಿಗೂ ಬಯಸಿದ್ದು, ನೆನೆಸಿಕೊಳ್ಳುವುದು ಅದೇ ಸೀದಾ ಸಾದಾ ಅಚ್ಚ ಬಿಳುಪು ಪಂಚೆ, ನಾರು ಮಡಿಯಲ್ಲಿ, ಜಗತ್ತೇ ಗೆಲ್ಲುವ ಭಂಗಿಯಲ್ಲಿ ಬಿಲ್ಲೆತ್ತಿ ನಿಂತ ಭಂಗಿಯಲ್ಲೇ ನೆನಪಾಗುತ್ತಾನೆ ಹೊರತಾಗಿ ಅದ್ಬುತ ವಜ್ರಖಚಿತ ಸಿಂಹಾಸನಾಧೀಶ ಶ್ರೀರಾಮ ನಮ್ಮ ಮನಸ್ಸಿಗೆ ಮುದಕೊಡುವ ಚಿತ್ರವಾಗುವುದೇ ಇಲ್ಲ. ಅದೇ ಅವನ ನಿಜವಾದ ತಾಕತ್ತು ಮತ್ತು ಶಕ್ತಿ. ಎಲ್ಲಾ ಇದ್ದೂ ಎಲ್ಲರೊಳಗೊಂದಾಗಿ, ಪ್ರತಿ ನಡೆಯ ಹಿಂದೆ ಜಗತ್ತಿನ ಅಷ್ಟೂ ಔನತ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಕಟಿಬದ್ಧನಾದ ಮೂರ್ತರೂಪ ಅವನು.

ಮಹಾಪುರುಷರು ಹುಟ್ಟುವುದಿಲ್ಲ ಅವರು ಒಂದೊಂದು ಯುಗವನ್ನೆ ತಮ್ಮದಾಗಿಸಿಕೊಳ್ಳುತ್ತಾರೆ. ಹಾಗೆ ಉಧ್ಬವಿಸಿದ ಸಾಮಾನ್ಯರೂಪಿಯಾಗಿಯೂ ಪ್ರತಿಯೊಬ್ಬರ ಮನಸ್ಸಿನ ಸಿಂಹಾಸನದಲ್ಲಿ ವಿರಾಜಿಸುವ ವ್ಯಕ್ತಿತ್ವವೇ ಶ್ರೀರಾಮಚಂದ್ರ.
ಇವತ್ತು ರಾಮಾಯಣದ ಕತೆಯ ಹೊರತಾಗಿಯೂ ರಾಮ ಯಾವ ಕಾಲಕ್ಕೂ ಪ್ರಸ್ತುತವಾಗಲು ಕಾರಣ, ಈ ಭೂಮಂಡಲ ಇರುವವರೆಗೂ ಪುರುಷನೊಬ್ಬ, ಸಮಕಾಲೀನ ಅಥವಾ ದೇಶಕಾಲದ ಗಡಿದಾಟಿದ ವ್ಯಕ್ತಿತ್ವದ ಚಿತ್ರಣವೊಂದು ಹೇಗಿರಬೇಕೆಂದು ಚಿಂತನೆಗೆಳಸಿದಾಗ ಹುಟ್ಟಿದ ಅಪರೂಪದ ವ್ಯಕ್ತಿತ್ವ ಶ್ರೀರಾಮನದ್ದು. ಹೊರತಾಗಿ ನಾವಂದುಕೊಂಡಂತೆ ಅವನದ್ದು ರಾಗದ್ವೇಷಗಳಿದ್ದ, ನಮ್ಮನಿಮ್ಮಂತೆ ಪತ್ನಿಯನ್ನು ಸಂಶಯಿಸುವ, ತನ್ನ ವ್ಯಕ್ತಿಗತ ಲಾಲಸೆಗೆ ಬಿದ್ದುಹೋದ ವ್ಯಕ್ತಿತ್ವವಲ್ಲ. ಅವನ ಪ್ರತಿ ನಡೆಯ ಹಿಂದೆಯೂ ಜಗದ ಮಹಾನ್ ಚಿಂತನೆಯ ಪರಿಕಲ್ಪನೆಗಳಿದ್ದವು, ಅವನ ಪ್ರತಿ ಹೆಜ್ಜೆಯ ಹಿಂದೆ ಈ ಜಗತ್ತಿನ ಎದುರಿಗೆ ಮಾದರಿಯಾಗಿ ನಿಲ್ಲಬಲ್ಲ ನಾಯಕನೊಬ್ಬ ನಡೆದುಕೊಳ್ಳಬೇಕಾದ ರೀತಿನೀತಿ ಹೇಗಿರಬೇಕು ಎನ್ನುವ ನಿಲುವುಗಳ ಸ್ಪಷ್ಠತೆ ಇತ್ತು.

ಹಾಗಾಗಿ ಅವನ್ಯಾವತ್ತೂ ತನಗಾಗಿ ಅಥವಾ ತನ್ನ ಮನಸ್ಸಿನ ಆಸೆಗಳ ಮೋಹಕ್ಕೆ ಬಿದ್ದು ನಿರ್ಧಾರಗಳನ್ನು ಕೈಗೊಳ್ಳಲೇ ಇಲ್ಲ ಎನ್ನುವುದೇ ಅವನನ್ನು ಜಾಗತಿಕವಾಗಿ ಯುಗಾಂತರಗಳಿಂದಲೂ ಪ್ರಥಮ ಶ್ರೇಣಿಯಲ್ಲಿ ನಿಲ್ಲಿಸಲು ಕಾರಣವಾಗಿತೇ ವಿನ: ಅವತಾರ ಪುರುಷನೆಂದಲ್ಲ.
ಶ್ರೀರಾಮನ ಹೆಸರಿನಲ್ಲಿ ಆದಷ್ಟು ಮಹಾಪರಿವರ್ತನೆಗಳು ಯಾವ ಯುಗದಲ್ಲೂ, ಕಾಲದಲ್ಲೂ ಆಗಲೇ ಇಲ್ಲ. ಇತಿಹಾಸ ನೋಡಿ. ಶ್ರೀರಾಮನ ಮಂದಿರದಿಂದ ಹಿಡಿದು, ಅವನ ಹೆಸರಿಗಾಗಿ ಪ್ರಾಣಕೊಡುವ ಕೋಟ್ಯಾಂತರ ಜನ ಎದ್ದು ನಿಲ್ಲುತ್ತಿದ್ದಾರೆ. ಅಂತಹ ಇನ್ನೊಬ್ಬ ಆದರ್ಶ ಅವತಾರಿಯ ಪುರುಷ/ಸ್ತ್ರೀಯ ಉದಾ. ನಮ್ಮೆದುರಿಗಿಲ್ಲ. ಪುರಾತನ ಮಹಾರಾಜ ಮನೆತನಗಳು, ವಂಶಗಳು, ಅವನ ಒಂದು ಹೆಸರಿನ ಪಾವಿತ್ರ್ಯತೆಗಾಗಿ ತಮ್ಮ ಜೀವಿತಾವಧಿಯ ಬೆಲೆ ತೆತ್ತು ಸತ್ತೇ ಹೋದರೆ ವಿನ: ಶ್ರೀರಾಮನನ್ನು ಮನಮಂದಿರದಿಂದ ಕೆಳಗಿಳಿಸಿ, ತಮ್ಮ ಬದುಕು ಕಟ್ಟಿಕೊಂಡ ಕತೆ ಲಭ್ಯವಾಗುವುದೇ ಇಲ್ಲ.
ಇವತ್ತಿಗೂ ಯಾವಕಾಲಕ್ಕೂ ಆದಿತ್ಯ ಹೃದಯ ಪ್ರಾಪ್ರವಾದ ಏಕಮಾತ್ರ, ಮಾನವ ರೂಪಿ ವ್ಯಕ್ತಿತ್ವ ಶ್ರೀರಾಮನದ್ದೆ. ಪೂರ್ತಿ ಭೂ ಮಂಡಲದ ಪಾಲಿಗೆ ಮತ್ತು ಬರಲಿರುವ ಭವ್ಯ ಭವಿತವ್ಯಕ್ಕಾಗಿ ವ್ಯಕ್ತಿಯೊಬ್ಬ, ಅದರಲ್ಲೂ ಪುರುಷನಾದವನು ಹೇಗಿರಬೇಕು ಎನ್ನುವುದರ ಪರಿಕಲ್ಪನೆಯ ಒಟ್ಟೂ ಮೊತ್ತ ಶ್ರೀರಾಮಚಂದ್ರ. ಭೂಮಿ ಇರುವವರೆಗೂ ಪ್ರತಿಹೆಣ್ಣಿನ ಮನದಲ್ಲಿ ಉಳಿದು ಹೋಗಲಿರುವ ಅಪರೂಪದ ಆದರ್ಶಮಯ ಸೌಮ್ಯಮೂರ್ತಿ ಅವನೇ. ತೀರಾ ವ್ಯಯಕ್ತಿಕವಾಗಿಯೂ ಪ್ರತಿ ಹೆಣ್ಣಿನ ಮನದಾಳದಲ್ಲಿ ಯಾವ ಕಾರಣಕ್ಕೂ ದ್ವೇಷಕ್ಕೆ ಈಡಾಗದೆ ಉಳಿದು ಹೋಗುವ ಏಕಮಾತ್ರ ಚಿತ್ರಣ ಶ್ರೀರಾಮನದ್ದು. ಇದು ಕಾಲಾತೀತ ಎನ್ನುವದಕ್ಕೆ ಉದಾ. ಕ್ರಿ.ಪೂ. ೫೦೧೫ ಜನೇವರಿಯ ಹೊತ್ತಿಗೆ ಉಧ್ಬವವಾದ ಅವನ ಬಗೆಗಿನ ಭಾವಗಳೇ ಈಗಲೂ ಉಳಿದುಹೋಗಿದ್ದು.
ಅವನು ಏನಾಗಿದ್ದ ಏನಾಗಿರಲಿಲ್ಲ ಎಂದು ಕೊಂಚ ಯೋಚಿಸಿದಾಗ ಅತಿ ದೊಡ್ಡ ಅಚ್ಚರಿಗೆ ಬಹುಶ: ವಾಲ್ಮಿಕಿಗಳೂ ಈಡಾಗಿದ್ದರೇನೋ. ಅವರ
” ಮಾ ನಿಷಾದ! ಪ್ರತಿಷ್ಟಾಂ ತ್ವಮಗಮ: ಶಾಸ್ವತಿ: ಸಮಾ:!
ಯತ್ ಕ್ರೌಂಚ್ ಮಿಥುನಾದೇಕಮವಧೀ: ಕಾಮ ಮೋಹಿತಮ್ !! ಎಂಬ ಸಾಲುಗಳೇ ರಾಮಾಯಣದ ಕೃತಿಗೆ ಕಾರಣವಾಗುತ್ತದೆ. ಕೊಂಚ ಅತಿರೇಕ ಎನ್ನಿಸಿದರೂ ರಾಮನಾಮ ಬಲವೇ ರಾಮನಿಗಿಂತಲೂ ಶ್ರೇಷ್ಠವೆಂಬ ಅಭಿವ್ಯಕ್ತಿಗೆ ಈಡಾದ, ಹೌದೆನ್ನಿಸುವಷ್ಟು ನಂಬುಗೆಗೆ ಪಾತ್ರವಾಗುವ ಏಕಮಾತ್ರ ದೃಷ್ಠಾಂತ ಶ್ರೀರಾಮನದ್ದು.
ಇವತ್ತು ಕೃಷ್ಣ, ಶಿವ, ಹನುಮ, ರಾಘವೇಂದ್ರ, ಬ್ರಹ್ಮ ಹೀಗೆ ಯಾರನ್ನೇ ಆಗಲಿ ಶ್ರೀಕಾರವಿಲ್ಲದೆ ಕರೆಯಬಹುದು. ಅದು ಸಹಜ ಎನ್ನಿಸಿಬಿಡುತ್ತದೆ. ಆದರೆ ರಾಮನನ್ನು ಶ್ರೀಕಾರವಿಲ್ಲದೆ ಕರೆದರೆ ಅದು ಅಪೂರ್ಣವೇ. ಮನದಲ್ಲಿಯೇ ಇದನ್ನು ಉಚ್ಚರಿಸಿಕೊಂಡು ವ್ಯತ್ಯಾಸ ನೋಡಿ. ಅದಕ್ಕಾಗಿಯೇ ಅವನು ಮತ್ತು ಅವನ ಹೆಸರೇ ಇವತ್ತಿಗೂ ಪ್ರತಿಹಂತದಲ್ಲೂ ಆರಂಭಕ್ಕಾಗಿ ಬಳಸಲ್ಪಡುತ್ತಿದ್ದು, ಶ್ರೀ ರಾಮ ಎನ್ನುವ ಏಕಮಾತ್ರ ಬೀಜಮಂತ್ರ ಕೋಟ್ಯಾಂತರ ಜನರನ್ನು ಒಂದೆಡೆಗೆ ಸೇರಿಸುವ ಶಕ್ತಿಯನ್ನು ಹೊಂದಿದೆ ಎನ್ನುವುದಕ್ಕೆ ವಾಸ್ತವಗಳು ಎದುರಿಗಿವೆ. ಗಾಯಿತ್ರಿ ಮಂತ್ರದ ಕರ್ತೃ ವಿಶ್ವಾಮಿತ್ರ ಅಂತಿಮವಾಗಿ ರಾಮನಾಮದ ಏಕಮಾತ್ರ ಜಪದಿಂದ ನೂರು ಗಾಯಿತ್ರಿ ಜಪದ ಪುಣ್ಯ ಪ್ರಾಪ್ತವಾದರೆ, ರಾಮನ ಏಕಮಾತ್ರ ನಾಮ ಸ್ಮರಣೆಯಿಂದ ಸಂಪೂರ್ಣ ವಿಷ್ಣು ಸಹಸ್ರ ನಾಮ ಜಪ ಪುಣ್ಯಫಲ ಪ್ರಾಪ್ರಿಯಾಗುತ್ತದೆನ್ನುವುದು ಅವನ ಹೆಗ್ಗಳಿಕೆ.
ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ,
ಸಹಸ್ರ ನಾಮ ತತ್ಯುಲ್ಯಂ ರಾಮನಾಮ ವರನಾನೇ..
ಅಸಲಿಗೆ ಶ್ರೀರಾಮ ವ್ಯಕ್ತಿ ಚಿತ್ರಣವಲ್ಲವೇ ಅಲ್ಲ. ಅವನೊಂದು ಬದುಕಿನ ಆದರ್ಶ. ಜೀವನ ಪ್ರೀತಿಯ ನಿರ್ವ್ಯಾಮೋಹಿ ಸಂಗತಗಳ ವಾಸ್ತವದ ಮೂಟೆ. ಹೇಗಿರಬೇಕು, ಇರಬಾರದು ಎನ್ನುವುದಕ್ಕೆ ಉದಾಹರಣೆಯಾಗಿ ಜೀವಂತ ದಂತಕತೆಯಾಗಿ, ಯುಗಯುಗಗಳಿಗೆ ಪ್ರವಹಿಸಿದ ಮಹಾನ ಚೇತನ. ಅವನಂತೆ ಇನ್ನೊಂದು ಚಿತ್ರ ಇನ್ನು ಈ ಭೂಮಿ ಮೇಲೆ ಅವತರಿಸುವುದು ಸಾಧ್ಯವೇ ಇಲ್ಲ ಎಂಬಲ್ಲಿಗೆ ಶ್ರೀರಾಮನೆಂಬ ಮಹಾ ತಪಸ್ವಿಯ ಬದುಕು ಸಂಪನ್ನವಾಗುತ್ತದೆ ಮತ್ತು ಬದುಕಿರುವ, ಬದುಕಲಿರುವ ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತದೆ. ಇವತ್ತು ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ಬಾರಿ ತಪುö್ಪ ಮಾಡಿ ತಲೆ ತಗ್ಗಿಸಿರಬಹುದು. ಆದರೆ ಅವನು ಮಾತ್ರ ರಾಮ ಹೀಗೇಕೆ ಮಾಡಿದೆ ಎನ್ನುವ ಪ್ರಶ್ನಾರ್ಥಕಕ್ಕೆ ಕಾರಣವಾಗುವಂತಹ ಬದುಕನ್ನು ಅವನು ಯಾವತ್ತೂ ಬದುಕಲೇ ಇಲ್ಲ. ಅವನ ಪ್ರತಿನಡೆಯ ಹಿಂದೆ ಕಾರ್ಯಕಾರಣ ಮತ್ತು ಧರ್ಮಕಾರಣ ಸಂಬಂಧಗಳಿದ್ದವು. ಧರ್ಮ ಎಂದರೆ ಈಗೀನ ಜಾತಿ ಪ್ರೇರಿತವಲ್ಲ. ಕೇವಲ ಮಾನವೀಯ ಧರ್ಮದ ನೆಲೆಯಲ್ಲಿ ಹರಳುಗಟ್ಟಲಾದ ಚಿಂತನೆಗಳಿದ್ದವು. ಅವನೊಳಗಿನ ಸ್ವಯಂ ಸಂಘರ್ಷದ ಪ್ರತ್ಯುತ್ಪನ್ನದ ಪ್ರಭಾವವೇ ಹೊರಗೆ ಕಾಣುತ್ತಿದ್ದ ಪ್ರಭಾವಳಿ. ಎದುರಿಗಿರುವವರಿಗೆ ನೀತಿ ಪಾಠ. ಹೀಗಿದ್ದಾಗ ಅವನು ದಾರಿ ತಪುö್ಪವುದಾರೂ ಹೇಗೆ..?
ಉಳಿದಂತೆ ಅವನ ಬದುಕಿನ ನಡೆಗಳ ಬಗೆಗಿನ ಆರೋಪ ಪ್ರತ್ಯಾರೋಪಗಳೇನೆ ಇದ್ದರೂ, ಅವೆಲ್ಲದಕ್ಕೂ ತಾರ್ಕಿಕ ಮತ್ತು ನ್ಯಾಯಿಕ, ಸಮ್ಮತ ಕಾರಣಗಳಿದ್ದೇ ಇದ್ದವು. ಬದುಕು ಎಂದರೆ ಏನು ಹೇಗಿರಬೇಕು..? ಯಾವ ನಿಲುವಿಗೂ ಯಾವ ತಾಕತ್ತಿಗೂ ಅಂಟಿಕೊಳ್ಳದೆ ಆದರೆ ಪ್ರತಿಯೊಂದನ್ನೂ ನಿರ್ವಹಿಸಿಯೂ ನಿಗರ್ವಿಯಾಗಿ ಹೇಗಿರಬೇಕು ಎಂದು ಪ್ರಾಯೋಗಿಕವಾಗಿ ಮೇಲ್ಪಂಕ್ತಿ ಹಾಕಿಕೊಟ್ಟ ಅಭಿಜಾತ ಪುರುಷ ರಾಮ. ಪ್ರಸ್ತುತ ಮತ್ತು ಜಾಗತಿಕ ಕಾಲಮಾನಗಳನ್ನು ಮೀರಿದ, ಯಾವ ವಿಶ್ಲೇಷಣೆ ಮತ್ತು ತರ್ಕಗಳ ನಂತರವೂ ಮನುಷ್ಯನೊಬ್ಬನನ್ನು ಹೀಗಿಬೇಕು ಎಂದು ಮಾದರಿಯಾಗಿ ಒಪ್ಪಬಹುದಾದರೆ ಅದಕ್ಕೆ ಉಳಿಯುವ ಏಕಮೇವಾದ್ವಿತೀಯ ಅಭಿಜಾತ ಮೂರ್ತರೂಪ ಅವನು.
ನಾವು ಧನಾತ್ಮಕವಾಗಿ ವಿಶ್ಲೇಶಿಸಿದರೆ ಅವನ ಹುಟ್ಟು, ವಿಶ್ವಾಮಿತ್ರರೊಂದಿಗಿನ ವಾಸ್ತವ್ಯ, ರಾಕ್ಷಸ ಸಂಹಾರ, ಅಹಲ್ಯಾ ಪರಿಹಾರ, ಶಿವಧನುಸ್ಸಿನ ಪರಾಕ್ರಮ, ಸಿತಾ ಪರಿಣಯ, ಯುವರಾಜ ಘೋಷಣೆ, ಹಿಂದೆಯೆ ಎರಗಿದ ಪಿತೃವಾಕ್ಯ ಪರಿಪಾಲನೆ ಕಾರಣ ವನವಾಸ, ಪಂಚವಟಿ ಪ್ರಸಂಗ, ಶೂರ್ಪನಖಿಯ ಮೇಲಿನ ಹಲ್ಲೆ, ಸುವರ್ಣ ಜಿಂಕೆಯ ಅನಿವಾರ್ಯದ ಹಿಂಬಾಲಿಸುವಿಕೆ, ಸೀತಾ ಅಪಹರಣ, ಜಟಾಯು, ಶಬರಿ, ಕಬಂಧ ವಿಮೋಚನೆ, ಸುಗ್ರೀವ ಮಾರುತಿ ಸಖ್ಯ, ವಾಲಿ ಮೋಕ್ಷ, ಲಂಕೆಗೆ ಲಗ್ಗೆ, ರಾವಣ ಹನನ, ವಿಭೀ ಷಣನೊಂದಿಗೆ ಹೊಂದಾಣಿಕೆ, ಸೀತೆಯ ಅಗ್ನಿ ಪರೀಕ್ಷೆ, ಮರಳಿ ಗೂಡಿಗೆ, ಮತ್ತೆ ಸೀತೆಯ ಅರಣ್ಯಪ್ರಸ್ತಾನ, ಕುಮಾರರ ಸಂಭವ, ಅಶ್ವಮೇಧ ಯಾಗ.. ಹೀಗೆ ರಾಮಾಯಣದ ಹಲವು ಸ್ತರಗಳಲ್ಲಿ ಆಕ್ಷೇಪಕ್ಕೀಡಾಗುವ ಸನ್ನಿವೇಶ ನಮಗೆ ಸಹಜವಾಗಿ ರುಚಿಸುತ್ತಿದೆ.

ಆದರೆ ಇಂತಹ ಯಾವುದೇ ಸನ್ನಿವೇಶದಲ್ಲೂ ಒಬ್ಬ ಮಾದರಿಯ ವ್ಯಕ್ತಿಯಾಗಿ ಸಮಾಜಕ್ಕೆ ನಡವಳಿಕೆ ಮತ್ತು ನಡಾವಳಿಕೆಗಳ ಮೇಲ್ಪಂಕ್ತಿಯಾಗಲಷ್ಟೆ ಶ್ರೀರಾಮ ಚಿಂತಿಸಿದ್ದು, ಅದಕ್ಕಾಗಿ ತನ್ನನು ತಾನು ಸಂಪೂರ್ಣ ತ್ಯಾಗಿಯಾಗಿ ಸಮರ್ಪಿಸಿಕೊಂಡಿದ್ದು ಕಾಣಿಸುತ್ತದೆಯೇ ವಿನ: ಸುಖಾ ಸುಮ್ಮನೆ ರಾಮನನ್ನು ಕಟಕಿಯಾಡುವವರ ನಂಜಿನ ವಸ್ತುವಾಗಿ ಅಲ್ಲ. ಒಂದುಕುಟುಂಬಕ್ಕೆ ಒಬ್ಬ ವ್ಯಕ್ತಿಯ ತ್ಯಾಗ ಎಷ್ಟು ಅವಶ್ಯವೋ ಹಾಗೆ ಒಂದು ದೇಶಕ್ಕೆ ಒಂದು ಕುಟುಂಬವೇ ತ್ಯಾಗಿ ಯಾಗಬೇಕೆನ್ನುವ ಸರಳ ಸೂತ್ರದ ಮೊದಲ ಸೂತ್ರಧಾರ ಅವನೇ ಆಗುತ್ತಾನೆ. ಸರ್ವ ಸುಖದ ಪರಿಕಲ್ಪನೆಯನ್ನು ತ್ಯಾಗದಲ್ಲೂ, ನ್ಯಾಯದಲ್ಲೂ ಹುಡುಕಿಕೊಳುಉವ ಮನೋಧರ್ಮದಲ್ಲಿ ಯುಗಾಂತರಗಳ ಮನಸ್ಥಿತಿಯನ್ನು ಮೀರಿನಿಲ್ಲುವ ಅಭಿಜಾತ ನಾಯಕ ರಾಮ ನಮ್ಮ ನಿಮ್ಮೆಲ್ಲರ ಮನಸ್ಸಿಗೆ ಮುದು ಕೊಡುವವನಾಗುವುದು ಅವನನ್ನು ಆಪ್ತತೆಯಿಂದ, ಕೂಲಂಕುಶವಾಗಿ ನೋಡಿದಾಗ ಮಾತ್ರ.
ನೆನಪಿರಲಿ ರಾಮಮಂತ್ರ ಎನ್ನುವುದಕ್ಕೂ ಮೊದಲೇ ರಾಮ ಎನ್ನುವ ಶಬ್ದದಲ್ಲೇ ಜೀವನದ ಪಾಪನಾಶನದ ಭಿತ್ತಿಯನ್ನು ಚಿತ್ರಿಸಬಲ್ಲಷ್ಟು ಸಶಕ್ತ ಮಂತ್ರ ಇನ್ನೊಂದು ಬರಲೇ ಇಲ್ಲ.
” ರ – ಕಾರೋಚ್ಛಾರ ಮಾತ್ರೇಣ ಮುಖಾನಿರ್ಯಾಂತಿ ಪಾತಕ:
ಪುನ: ಪ್ರವೇಶ ಭೀತ್ಯಾತು: ಮ-ಕಾರಸ್ತು ಕವಾಟವತ್: ” ಎಂಥಾ ಅಧ್ಬುತ ತಂತ್ರಬದ್ಧ ಜೋಡಣೆ.
ರಾ-ಎನ್ನುವ ಉಚ್ಛಾರದಲ್ಲೇ ಬಾಯಿಯಿಂದ ಪಾಪವೆಲ್ಲಾ ಹೊರಹೋಗುವ ಪಾಪಗಳೆಲ್ಲಾ ನಮ್ಮನ್ನು ಮತ್ತೆ ಸೇರದಿರಲಿ ಎಂದು ಮ-ಉಚ್ಛಾರದಲ್ಲಿ ಮುಚ್ಚಿಕೊಳ್ಳುವ ಮೂಲಕ ದೇಹ ಮನಸ್ಸು ಶುದ್ಧಿಯಾಗುತ್ತಾ ರಾಮ ನಾಪ ಜಪದಲ್ಲಿ ಮೋಕ್ಷ ಕಾಣಲಿ ಎನ್ನುತ್ತಾ, ಇದಕ್ಕೆ ಪೂರಕವಾಗಿ
“..ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ.
ಸೋಮಶೇಖರ ತನ್ನ ಭಾಮೆಗೊಲಿದ ಮಂತ್ರ,
ರಾಮ ಮಂತ್ರವ ಜಪಿಸೋ ಹೇ ಮನುಜ ” ಎನ್ನುವ ಮೂಲಕ ಅಂತಿಮವಾಗಿ ಪ್ರತಿ ಅಕ್ಷರದಲ್ಲೂ ಶಕ್ತಿ ಸಂಚಯನದ ಸಾಕಾರದ ಮೂರ್ತಿ ಶ್ರೀ ರಾಮ ನಿನಗೆ ನಮೋ ನಮ:

Share This Article
Leave a comment