ದುಡ್ಡಿಗಾಗಿ ಕಾಯುತ್ತಿವೆ ಸರ್ಕಾರದಲ್ಲಿ ಫೈಲ್ಗಳು. ಒಂದು ಸಣ್ಣ ಸಹಿಗಾಗಿ ತಿಂಗಳು ಗಟ್ಟಲೆ ಸಚಿವರ ಮುಂದೆ ಬಿದ್ದು ಧೂಳುತ್ತಿನ್ನುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತಮ್ಮದೇ ಸರ್ಕಾರದ ಸಚಿವರ ವಿರುದ್ಧ ಕಿಡಿಕಾರಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಸಚಿವ ಸಿ.ಟಿ.ರವಿ ಬಳಿ ಕೆಲ ಬಿಜೆಪಿ ಶಾಸಕರು ಹೇಳಿರುವುದು ಸತ್ಯ. ಸರ್ಕಾರದಲ್ಲಿ ಫೈಲ್ ಮುಂದಕ್ಕೆ ಹೋಗದೇ ವಿಳಂಬ ಆಗುತ್ತಿದೆ. ಅದು ಸ್ವಪಕ್ಷ, ಪರಪಕ್ಷ ಅಂತೇನಿಲ್ಲ. ನನ್ನವೇ ಎಷ್ಟೋ ಫೈಲ್ಗಳು ಇನ್ನೂ ಕಾಯುತ್ತ ಕುಳಿತಿವೆ. ಫೈಲ್ಗಳು ಮುಂದಕ್ಕೆ ಹೋಗದೆ ಇರೋದರ ಅರ್ಥವೇನು? ವಾಟ್ ಈಸ್ ಇಟ್ ಮೀನ್ಸ್? ಇದರ ಉದ್ದೇಶ ಕಾಂಚಾಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೆಲವು ಸಚಿವರಿಂದ ಇದು ನನಗೂ ಅನುಭವ ಆಗಿದೆ. ತಿಂಗಳಾನುಗಟ್ಟಲೇ ಮಂತ್ರಿಗಳು ಫೈಲ್ಗಳನ್ನು ಕೊಳೆಸೋದು ಸರಿಯಲ್ಲ. ಮಂತ್ರಿಗಳು ಇದರಿಂದ ಎಚ್ಚೆತ್ತುಕೊಳ್ಳಬೇಕು. ನಾವೂ ಮಂತ್ರಿಗಿರಿ ಮಾಡಿದ್ದೇವೆ. ಯಾವ ಫೈಲ್, ಎಷ್ಟು ದಿನ, ಯಾರ ಬಳಿ ಇರಬೇಕು ಎಂದು ನಮಗೂ ಗೊತ್ತಿದೆ. ಇದೆಲ್ಲವೂ ಯಡಿಯೂರಪ್ಪನವರಿಗೆ ಗೊತ್ತಿದೆ. ಅವರ ಕೈಯಲ್ಲೂ ಇದನ್ನು ಸರಿ ಮಾಡಲು ಆಗುತ್ತಿಲ್ಲ. ಸಿ.ಟಿ.ರವಿ ಇದನ್ನು ಹೈಕಮಾಂಡ್ ಗಮನಕ್ಕೆ ತರುತ್ತಾರೆ ಎಂದರು.
ಫೈಲ್ ಮೂವ್ಮೆಂಟ್ ವಿಚಾರ ಸಿದ್ದರಾಮಯ್ಯ ಕಾಲದಿಂದಲೂ ಕೈ ಮಿರಿದೆ. ಸಿದ್ದರಾಮಯ್ಯ ಯಾವ ಮಂತ್ರಿಗೂ ಲಗಾಮು ಹಾಕಿರಲಿಲ್ಲ. ಅದರ ಮುಂದುವರಿದ ಭಾಗವೇ ಇದು ಎಂದು ಸಿದ್ದರಾಮಯ್ಯ ವಿರುದ್ಧ ಸಹ ಎಚ್.ವಿಶ್ವನಾಥ್ ಹರಿಹಾಯ್ದಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು