ಮಂಡ್ಯದ ಆಧುನಿಕ ಭಗೀರಥನ ಸಾಮಾಜಿಕ ಸೇವೆಗೆ ಅಧಿಕಾರಿಗಳು ಅಡ್ಡಿಯಾದ ಹಿನ್ನೆಲೆ ನೊಂದುಕೊಂಡ ಮಳವಳ್ಳಿಯ ಕಲ್ಮನೆ ಕಾಮೇಗೌಡರು ಅನ್ನನೀರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.
ಸಾಮಾಜಿಕ ಸೇವೆ ಮುಂದುವರೆಸಲು ಅಧಿಕಾರಿಗಳಿಂದ ಅಡ್ಡಿಯಾದ ಹಿನ್ನೆಲೆ ಕಾಮೇಗೌಡರು ಅಧಿಕಾರಿಗಳ ವರ್ತನೆಗೆ ಬೇಸತ್ತು ಆಹಾರ ತ್ಯಜಿಸಿದ್ದರು. ಈಗ ಮಳವಳ್ಳಿ ತಾಲೂಕು ಆಡಳಿತವು ಅನಾರೋಗ್ಯದಿಂದ ಬಳಲುತ್ತಿದ್ದ ಗೌಡರನ್ನು ಆಸ್ಪತ್ರೆಗೆ ದಾಖಲಿಸಿದೆ.
ಅಂತರ್ಜಲ ಅಭಿವೃದ್ಧಿಗೆ ಕೆರೆ ಕಟ್ಟೆ ನಿರ್ಮಿಸಿ ಲಕ್ಷಾಂತರ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾಯಕ ಯೋಗಿ ಆಗಿದ್ದರು.
ಕಳೆದ 40-50 ವರ್ಷಗಳಿಂದ ಸ್ವಂತ ಖರ್ಚಿನಲ್ಲಿ ಮರಗಿಡಗಳ ಪೋಷಣೆ ಮಾಡುತ್ತಿದ್ದರು. ಪರಿಸರ ಪ್ರೇಮಿ, ಆಧುನಿಕ ಭಗೀರಥ ಕಾಮೇಗೌಡರ ಕಾರ್ಯವನ್ನು ಪ್ರಧಾನಿ ಮಂತ್ರಿ ಮೋದಿಯವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸಿದ್ದರು.
ಮಾಜಿ ಸಿಎಂ ಯಡಿಯೂರಪ್ಪ ಕಾಮೇಗೌಡರಿಗೆ ಮನೆ, ಮಕ್ಕಳಿಗೆ ಉದ್ಯೋಗ ಹಾಗೂ ತಮ್ಮ ಸೇವೆಗೆ ಆರ್ಥಿಕ ನೆರವು ಭರವಸೆ ನೀಡಿದ್ದರು.
ಆದರೆ ಇದುವರೆಗೂ ಅವರಿಗೆ ನೀಡಿರುವ ಯಾವುದೇ ಭರವಸೆಗಳು ಈಡೇರಲಿಲ್ಲ. ಕೆಲ ಮಂದಿ ಗೌಡರ ವಿರುದ್ಧ ಮರಳು ಗಣಿಗಾರಿಕೆ ಆರೋಪ ಹೊರಿಸಿದ್ದು, ಇಳಿ ವಯಸ್ಸಿನಲ್ಲೂ ಅವರಿಗೆ ತನಿಖೆ ಎದುರಿಸಬೇಕಾದ ಸ್ಥಿತಿ ಬಂದಿದೆ.