February 20, 2026

Newsnap Kannada

The World at your finger tips!

d k ravi

ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಬೇಡಿದ ಕುಸುಮಾ ಕಾಂಗ್ರೆಸ್ ನ ಅಚ್ಚರಿಯ ಅಭ್ಯರ್ಥಿಯೇ ?

Spread the love

ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ
ಕಾಂಗ್ರೆಸ್ ನ ಅಚ್ಚರಿಯ ಅಭ್ಯರ್ಥಿ ಯಾಗುವ ನಿರೀಕ್ಷೆಯಲ್ಲಿರುವ ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ.ರವಿ ಪತ್ನಿ ಎಚ್.ಕುಸುಮಾ ಗುರುವಾರ ಬೆಂಗಳೂರಿನಲ್ಲಿ ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿ, ಆಶೀರ್ವಾದ ಬೇಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರಿನ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಿದ ಎಚ್. ಕುಸುಮಾ, ಶ್ರೀಗಳ ಆಶೀರ್ವಾದ ಕೋರಿದರು.

ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳ ಸಂಖ್ಯೆ ಹೆಚ್ಚಿವೆ. ಈ ಮತಗಳಿಂದಲೇ ಮುನಿರತ್ನ ಗೆಲ್ಲುತ್ತಿದ್ದರು. ಈಗ ಅವರು ಬಿಜೆಪಿಗೆ ಹೋಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿರುವ ಒಕ್ಕಲಿಗ ಆಕಾಂಕ್ಷಿತರಲ್ಲಿ ಸಾಕಷ್ಟು ಪೈಪೋಟಿಗಳು ನಡೆದಿವೆ.

ಅಚ್ಚರಿಯ ಅಭ್ಯರ್ಥಿ ಯಾರು?

ಈ ನಡುವೆ ಕಾಂಗ್ರೆಸ್ ನಿಂದ ಅಚ್ಚರಿಯ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸುವ ಚಿಂತನೆ ನಡೆದಿದೆ. ಆ ಅಚ್ಚರಿಯ ಅಭ್ಯರ್ಥಿಯೇ ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ. ರವಿ ಪತ್ನಿ ಎಚ್. ಕುಸುಮಾ ಇರಬಹುದು ಎಂದು ಊಹಿಸಲಾಗಿದೆ.
ಇಂದು ಶ್ರೀಗಳನ್ನು ಭೇಟಿ ಮಾಡಿರುವ ಲೆಕ್ಕಾಚಾರ ನೋಡಿದರೆ ಮುಂದಿನ ದಿನಗಳಲ್ಲಿ ಕುಸುಮಾ ಅವರೂ ಕಣಕ್ಕೆ ಇಳಿಯುತ್ತಾರೆಂಬ ನಿರೀಕ್ಷೆಯೂ ಇದೆ.

ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮುನಿರತ್ನ ಗೆಲವು ಸಾಧಿಸಿದ್ದರು. ಜೆಡಿಎಸ್ ಅಭ್ಯರ್ಥಿ ಯಾಗಿ ಮುನಿರಾಜು ವಿರುದ್ಧ ಸೋತಿದ್ದ ರಾಮಚಂದ್ರ, ಬೆಂಗಳೂರು ಉತ್ತರ ತಾಲೂಕು ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ್, ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಪೈಪೋಟಿ ನಡೆಸಿದ್ದಾರೆಂದು ಗೊತ್ತಾಗಿದೆ.
ಸಿರಾ ಮತ್ತು ರಾಜರಾಜೇಶ್ವರಿ ನಗರದಲ್ಲಿ ಏಕಾಂಗಿಯಾಗಿ ಸ್ಪರ್ಧೆ ನಡೆಸಲು ಬಯಸಿರುವ ಜೆಡಿಎಸ್ ಇಂದು- ನಾಳೆಯೊಳಗೆ ತನ್ನ ಅಭ್ಯರ್ಥಿ ಯ ಹೆಸರನ್ನು ಅಂತಿಮಗೊಳಿಸಲಿದೆ. ಬಿಜೆಪಿಯಿಂದ ಮುನಿರತ್ನಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮಾತ್ರ ತಮ್ಮ ಅಭ್ಯರ್ಥಿ ಯನ್ನು ಅಂತಿಮಗೊಳಿಸುವುದು ಬಾಕಿ ಇದೆ.

error: Content is protected !!