ನಾಣ್ಯ ಹಾಕುವುದಾಗಿ ಹೇಳಿ
ಯುವತಿಯೊಬ್ಬಳು ಹೆತ್ತವರ ಕಣ್ಣೆದ್ದುರಲ್ಲೇ ಭೀಮಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವಿಜಯಪುರದಲ್ಲಿ ನಡೆದಿದೆ.
ಐಶ್ವರ್ಯ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಧಾರವಾಡದ ನವಲಗುಂದ ಪಟ್ಟಣದ ನಿವಾಸಿಯಾಗಿರುವ ಐಶ್ವರ್ಯ ಕುಟುಂಬಸ್ಥರೊಂದಿಗೆ ಗಾಣಗಾಪುರ ದತ್ತಾತ್ರೆಯ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಐಶ್ವರ್ಯ ಗಾಣಗಾಪುರ ದತ್ತಾತ್ರೆಯ ದೇವಸ್ಥಾನಕ್ಕೆ ಹೋಗಲೆಂದೇ ವಿಜಯಪುರದ ಇಂಡಿ ಪಟ್ಟಣದಲ್ಲಿದ್ದ ಅಕ್ಕನ ಮನೆಗೆ ತಾಯಿಯ ಜತೆ ಬಂದಿದ್ದಳು.
ಮಾರ್ಗ ಮಧ್ಯೆ ವಿಜಯಪುರದ ಆಲಮೇಲ ಮತ್ತು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕು ನಡುವೆ ಭೀಮಾನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಬಳಿ ವಾಹನ ನಿಲ್ಲಿಸುವಂತೆ ಐಶ್ವರ್ಯಾ ಕೇಳಿದ್ದಾಳೆ. ಬಳಿಕ ನದಿಗೆ ನಾಣ್ಯ ಹಾಕಬೇಕೆಂದು ಹೇಳಿ ವಾಹನ ಇಳಿದು ಸೇತುವೆಯ ಅಂಚಿಗೆ ಹೋಗಿ, ಮೇಲಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಐಶ್ವರ್ಯಾಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ.