ರೈತನಿಗೆ ಪರಿಹಾರ ನೀಡುವಲ್ಲಿ ವಿಳಂಬವಾದ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಕಲಬುರಗಿ ಜಿಲ್ಲಾಧಿಕಾರಿ ಸರ್ಕಾರಿ ವಾಹನ ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.
ಈ ಜಮೀನು ಮುಳಗಡೆಯಾಗಿ ಬರೋಬ್ಬರಿ ಹತ್ತು ವರ್ಷಗಳೆ ಕಳೆದು ಹೋಗಿದೆ. ಜಮೀನು ಮುಳುಗಡೆ ಪರಿಹಾರ ಕೊಡಬೇಕಿದ್ದ ನೀರಾವರಿ ಇಲಾಖೆ ಇದುವರೆಗೂ ಪರಿಹಾರ ನೀಡಿರಲಿಲ್ಲ.
ರೈತನಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ರೈತ ಕೋರ್ಟ್ ಮೊರೆ ಹೋಗಿದ್ದ. ರೈತನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡುವಂತೆ ಆದೇಶ ನೀಡಿದೆ.
ನ್ಯಾಯಾಲಯದ ಆದೇಶದ ಕಾಪಿಯನ್ನು ತೆಗೆದುಕೊಂಡು ಬಂದ ಕೋರ್ಟ್ ಸಿಬ್ಬಂದಿ ಮತ್ತು ವಕೀಲರು ಜಿಲ್ಲಾಧಿಕಾರಿ ಕಾರನ್ನು ಜಪ್ತಿ ಮಾಡುವುದಕ್ಕೆ ಮುಂದಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಉಡಚಣ ಗ್ರಾಮದ ರೈತ ಕಲ್ಲೆಶ್ ಮೇತ್ರೆ ಅವರ 33 ಗುಂಟೆ ಜಮೀನು 2010 ರಲ್ಲಿ ಭೀಮಾ ಏತ ನೀರವಾರಿ ಯೋಜನೆ ಅಡಿಯಲ್ಲಿ ಮುಳುಗಡೆಯಾಗಿತ್ತು.
ಜಮೀನು ಮುಳುಗಡೆಯಾದ ಹಿನ್ನೆಲೆ ಪರಿಹಾರ ರೂಪದಲ್ಲಿ 7 ಲಕ್ಷ 41 ಸಾವಿರ ರೂಪಾಯಿ ನೀಡಬೇಕಿತ್ತು. ಆದರೆ ಪರಿಹಾರ ನೀಡದೆ ಸತಾಯಿಸುತ್ತಿದ್ದ ಕಾರಣ ರೈತ ಕೋರ್ಟ್ ಮೊರೆ ಹೋಗಿದ್ದರು.