ಹೈಕೋರ್ಟ್ ಆದೇಶ ಉಲ್ಲಂಘನೆ: ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ನ್ಯಾಯಾಂಗ ನಿಂದನೆ

Team Newsnap
2 Min Read
Rohini Sindhuri's husband Sudhir grab land in Yalahanka? Complaint via tweet to DGP ರೋಹಿಣಿ ಸಿಂಧೂರಿ ಪತಿ ಸುಧೀರ್ ಯಲಹಂಕದಲ್ಲಿ ಭೂ ಕಬಳಿಕೆ ? ಡಿಜಿಪಿಗೆ ಟ್ವೀಟ್ ಮೂಲಕ ದೂರು

ನ್ಯಾಯಾಲಯ ಆದೇಶ ನಂತರವೂ ವ್ಯಕ್ತಿಯೊಬ್ಬರಿಗೆ ಜಮೀನಿನ ಖಾತೆ ಮಾಡಿಕೊಡದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಲಾಗಿದೆ.

ಹೈಕೋರ್ಟ್ ನ ಏಕ ಸದಸ್ಯ ಪೀಠ ಆದೇಶಿಸಿದ್ದರೂ ಭೂಮಿಯ ಖಾತೆ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿ ಮೈಸೂರಿನ ಎಚ್.ಬಿ. ಅಶೋಕ್ ಸೇರಿ 5 ಮಂದಿ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಆರೋಪಿತ ಅಧಿಕಾರಿ ರೋಹಿಣಿ ಸಿಂಧೂರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ, ಜಮೀನು ಖಾತೆ ಮಾಡಿಕೊಡಲು ಹಲವು ಸಮಸ್ಯೆಗಳಿವೆ. ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ, ವಿವಾದಿತ ಭೂಮಿಗೆ ಹಲವರು ಹಕ್ಕು ಸಾಧನೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ಸಂಬಂಧ ದಾಖಲೆಗಳನ್ನು ಸಲ್ಲಿಸಲು ಹಾಗೂ ನ್ಯಾಯಾಲಯದ ಆದೇಶ ಪಾಲಿಸಲು 3 ತಿಂಗಳ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಡಿಸಿ ರೋಹಿಣಿ ನೀಡಿದ ಸಬೂಬುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಇದೀಗ ನೀವು ದಾಖಲೆಗಳನ್ನು ಏಕೆ ಸಲ್ಲಿಸುತ್ತೀರಿ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶ ನೀಡಿದೆ. ಈ ಹಂತದಲ್ಲಿ ನೀವು ದಾಖಲೆಗಳನ್ನು ಪರಿಶೀಲಿಸುವುದು, ಸಲ್ಲಿಸುವುದು ಎಂದರೆ ಏನರ್ಥ. ಇಂತಹ ಅಧಿಕಾರ ನಿಮಗೆ ಹೇಗೆ ಲಭ್ಯವಿದೆ. ನಿಮಗೆ ನ್ಯಾಯಾಲಯದ ಆದೇಶ ಪಾಲಿಸಬೇಕೆಂಬ ಇಚ್ಛೆಯೇ ಇದ್ದಂತಿಲ್ಲ ಎಂದಿತು.

ಸರ್ಕಾರಿ ವಕೀಲರನ್ನು ಉದ್ದೇಶಿಸಿ, ಅಧಿಕಾರಿಗಳಿಗೆ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಹೇಳಿಕೊಡಿ. ನ್ಯಾಯಾಲಯ ಈ ಹಿಂದೆ ಆದೇಶ ಹೊರಡಿಸುವ ಮುನ್ನ ಹೇಳಬೇಕಿದ್ದ ವಿಚಾರಗಳನ್ನು ಈಗ ಹೇಳಲು ಬರುತ್ತಿದ್ದಾರೆ. ಅಧಿಕಾರಿಗಳಿಗೆ ನ್ಯಾಯಾಲಯದ ಆದೇಶಗಳ ಬಗ್ಗೆ ತಿಳಿದಂತೆ ಕಾಣುವುದಿಲ್ಲ. ಜತೆಗೆ ತಾವು ಅಂದುಕೊಂಡದ್ದು ಹಾಗೂ ನಡೆದುಕೊಂಡದ್ದೇ ಸರಿ ಎಂದು ಭಾವಿಸಿದ್ದಾರೆ. ಅಧಿಕಾರಿಗಳು ನ್ಯಾಯಾಲಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಿಕೊಡಿ ಎಂದು ಪೀಠ ಬೇಸರ ವ್ಯಕ್ತಪಡಿಸಿತು.

ಮಾಚ್೯ 8 ರಂದು ಖುದ್ದು ಹಾಜರಿಗೆ ಸೂಚನೆ :

ಪ್ರಕರಣದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ತಹಶೀಲ್ದಾರ್ ಕೆ.ಆರ್. ರಕ್ಷಿತ್ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಈ ಇಬ್ಬರೂ ಆರೋಪಿ ಅಧಿಕಾರಿಗಳ ವಿರುದ್ಧ ಮಾರ್ಚ್ 8ರಂದು ಆರೋಪ ನಿಗದಿಪಡಿಸಲಾಗುವುದು. ಆದ್ದರಿಂದ ಇಬ್ಬರೂ ಅಧಿಕಾರಿಗಳು ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಿರಬೇಕು ಎಂದು ಪೀಠ ಆದೇಶಿಸಿತು.

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕುರುಬಾರಹಳ್ಳಿಯಲ್ಲಿ ಅರ್ಜಿದಾರ ಅಶೋಕ್ ಸೇರಿದಂತೆ ಕೆಲ ವ್ಯಕ್ತಿಗಳು ಬಿ ಖರಾಬ್ ಜಮೀನು ಖಾತೆಗೆ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಜಿಲ್ಲಾಧಿಕಾರಿ ಅರ್ಜಿಗಳನ್ನು ತಿರಸ್ಕರಿಸಿದ್ದರಿಂದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಪೀಠ ಅರ್ಜಿದಾರರಿಗೆ ಖಾತೆ ಮಾಡಿಕೊಡುವಂತೆ 2020ರ ಜೂನ್ 19ರಂದು ಆದೇಶಿಸಿತ್ತು. ಈ ಆದೇಶ ನಿರ್ಲಕ್ಷ್ಯ ಮಾಡಿರುವುದೇ ನ್ಯಾಯಾಂಗ ನಿಂದನೆ ಗುರಿ ಆದಂತಾಗಿದೆ.

Share This Article
Leave a comment