ಚಿತ್ರದುರ್ಗದ ಯೋಗವನ ಬೆಟ್ಟಗಳ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ತಮಗೆ ಭಾರೀ ಅನ್ಯಾಯವಾಗಿದೆ ಎಂದು ಆರೋಪಿಸಿ ಸ್ವಾಮೀಜಿಯೊಬ್ಬರು ಸಚಿವ ಶ್ರೀರಾಮುಲು ಎದುರಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಯೋಗವನ ಬೆಟ್ಟಗಳ ಅಧ್ಯಕ್ಷರಾಗಿದ್ದ ಸಿದ್ದಲಿಂಗ ಸ್ವಾಮೀಜಿ ಲಿಂಕೈಕ್ಯರಾಗಿದ್ದರು. ಶ್ರೀಗಳ ನಿಧನದ ಬಳಿಕ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆದಿತ್ತು.
ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ತಿಪ್ಪೇರುದ್ರ ಸ್ವಾಮೀಜಿ ನಿನ್ನೆ ಸಮಾಜ ಕಲ್ಯಾಣ ಸಚಿವರಿಗೆ ಮನವಿ ನೀಡಲು ಬಂದಿದ್ದರು.
ಸಚಿವರಿಗೆ ಮನವಿ ಪತ್ರ ನೀಡಿದ ನಂತರ ಏಕಾಏಕಿ ಸಚಿವ ಎದುರಲ್ಲೇ ವಿಷ ಸೇವಿಸಿದರು. ಸ್ವಾಮೀಜಿಗಳ ಸ್ಥಿತಿ ಗಂಭೀರವಾಗಿದೆ. ಈ ಘಟನೆ
ಚಿತ್ರದುರ್ಗದ ಬಿಜೆಪಿ ಕಚೇರಿ ಮುಂಭಾಗದಲ್ಲೇ ನಡೆದಿದೆ.
ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕಾರಣಿ ಸಭೆ ನಡೆಯುತ್ತಿತ್ತು. ಸಭೆ ಮುಗಿಯುತ್ತಿದ್ದಂತೆ ಸಚಿವ ಬಿ. ಶ್ರೀರಾಮುಲು ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆಗಮಿಸಿದರು. ಇದೇ ಸಂದರ್ಭದಲ್ಲಿ ಮನವಿ ಪತ್ರ ನೀಡಲು ಚಿತ್ರದುರ್ಗದ ತಿಪ್ಪೇರುದ್ರ ಸ್ವಾಮಿ ಆಗಮಿಸಿದರು. ಸಚಿವರಿಗೆ ಮನವಿ ಪತ್ರ ನೀಡುತ್ತಿದ್ದಂತೆ ಜೇಬಿನಲ್ಲಿದ್ದ ವಿಷದ ಬಾಟಲಿ ತೆಗೆದು ಸಚಿವರ ಎದುರಲ್ಲೇ ವಿಷ ಸೇವಿಸಿದರು. ಇನ್ನೂ ವಿಷ ಕುಡಿಯುತ್ತಿದ್ದಂತೆ ಸ್ಥಳದಲ್ಲೇ ಇದ್ದ ಶ್ರೀರಾಮುಲು ಬಿಡಿಸಲು ಮುಂದಾದರು.
ಘಟನಾ ಸ್ಥಳಕ್ಕೆ ಆಗಮಿಸಿದ ಬಡಾವಣೆ ಠಾಣೆ ಪೊಲೀಸರು ಸ್ವಾಮೀಜಿಗಳನ್ನ ಕೂಡಲೇ ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಿದರು. ಸ್ವಾಮೀಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.