ತಾಲೂಕು ಪಂಚಾಯತಿ ವ್ಯವಸ್ಥೆಯ ರದ್ದಿಗೆ ಚಿಂತನೆ – ಸಚಿವ ಈಶ್ವರಪ್ಪ

Team Newsnap
2 Min Read

ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಸಲುವಾಗಿ ತಾ ಪಂ ಆಡಳಿತ ವ್ಯವಸ್ಥೆಯನ್ನು ರದ್ದುಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ‌ರಾಜ್ಯ ಸಚಿವ ಕೆ ಎಸ್ ಈಶ್ವರಪ್ಪ ವಿಧಾನ ಸಭೆಯಲ್ಲಿ ಹೇಳಿದ್ದಾರೆ.

ಮುಂದಿನ 3 – 4 ತಿಂಗಳಲ್ಲಿ ತಾಪಂ ಮತ್ತು ಜಿಪಂ ಚುನಾವಣೆ ನಡೆಯುವ ಸಾಧ್ಯತೆ ನಡುವೆಯೂ ಇಂತಹ ಹೇಳಿಕೆ ಕುತೂಹಲಕ್ಕೆ ಎಡೆ ಮಾಡಿವೆ.

ವಿಧಾನ ಸಭೆಯಲ್ಲಿ ನಿನ್ಮೆ ನಡೆದ ಚರ್ಚೆಯಲ್ಲಿ ಜೆಡಿಎಸ್ ಸದಸ್ಯ ವೆಂಕಟರಾವ್ ನಾಡಗೌಡ ಮಾತನಾಡಿ, ತಾಪಂ‌ ನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ತಾಪಂ ರದ್ದುಪಡಿಸುವ ಮೂಲಕ ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆ ಬದಲು ಎರಡೇ ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಹೇಳಿದರು. ‌

ಪರಿಣಾಮಕಾರಿ ಕೆಲಸ ಆಗೋಲ್ಲಾ:

ಸಚಿವ ಈಶ್ವರಪ್ಪನವರು ಉತ್ತರಿಸಿ, ಜಿಪಂ, ತಾಪಂ ಹಾಗೂ ಗ್ರಾಪಂ ಪೈಕಿ ತಾಲೂಕು ಪಂಚಾಯಿತಿ ಬೇಕಿಲ್ಲ ಎಂಬ ಅಭಿಪ್ರಾಯ ಹಲವರಲ್ಲಿದೆ. ಪರಿಣಾಮ ಕಾರಿಯಾಗಿ ಕೆಲಸ ಮಾಡಲು ತಾಪಂಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ 3 ಹಂತಗಳ ಪಂಚಾಯಿತಿ ವ್ಯವಸ್ಥೆ ಬದಲು ಎರಡು ಹಂತಗಳ ಪಂಚಾಯಿತಿಯನ್ನು ಜಾರಿಗೆ ತರಬೇಕು ಎಂಬ ಭಾವನೆ ಬಹುತೇಕರಲ್ಲಿದೆ ಎಂದರು.

ಬಹುತೇಕರು ಗ್ರಾಪಂಗೆ ಸ್ಪರ್ಧೆ ಮಾಡಿದ್ದಾರೆ:

ತಾಪಂಗಳಲ್ಲಿ ಪರಿಣಾಮಕಾರಿ ಕೆಲಸ ಮಾಡೋಕೆ ಆಗಲ್ಲ ಎಂಬ ಕಾರಣದಿಂದಾಗಿಯೇ ಈ ಬಾರಿ ಸಾಕಷ್ಟು ಮಂದಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದರು ಎಂದರು.

ನಮ್ಮ ಕೈಲಿ ಇಲ್ಲ – ಕೇಂದ್ರ ರದ್ದು ಮಾಡಬೇಕು:

ಜಿಪಂ, ತಾಪಂ ಹಾಗೂ ಗ್ರಾಪಂ ಕೇಂದ್ರದ ಕಾನೂನಿನ ಮೂಲಕ ಅಸ್ತಿತ್ವಕ್ಕೆ ಬಂದವು. ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಎರಡು ಹಂತಗಳಿಗೆ ಇಳಿಸುವ ಬಗ್ಗೆ ನಾವೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದು ದೇಶದ ಬಹುತೇಕ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ವ್ಯವಸ್ಥೆ. ಯಾವ ರಾಜ್ಯ 20 ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಹೊಂದಿದೆಯೋ ಆ ರಾಜ್ಯಗಳಿಗೆ ಮಾತ್ರ ಇದರಿಂದ ವಿನಾಯಿತಿ ಇದೆ. ಈ ಕುರಿತು ಶಾಸಕರು ಮತ್ತಷ್ಟು ಅಭಿಪ್ರಾಯವನ್ನು ನೀಡಿದರೆ ಸರ್ಕಾರ ಮುಂದಿನ ಹೆಜ್ಜೆ ಇಡಲು ಅನುಕೂಲವಾಗುತ್ತೆ. ತಾಪಂ ರದ್ದುಗೊಳಿಸಿ ಎರಡೇ ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡಬಹುದು ಎಂದರು.

Share This Article
Leave a comment