ಮೈಸೂರು ನಗರದ ಹೃದಯ ಭಾಗದಲ್ಲಿ ಶಿಥಿಲಗೊಂಡಿರುವ ದೇವರಾಜ ಮಾರುಕಟ್ಟೆ ಮತ್ತು ಲಾನ್ಸ್ಡೌನ್ ಕಟ್ಟಡ ಕುರಿತು ಶಾಸಕ ಎಲ್.ನಾಗೇಂದ್ರ ಅವರು ವಿಧಾನ ಸಭೆಯಲ್ಲಿ ಧ್ವನಿ ಎತ್ತಿದರು.
ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ಬಂದು ಪರಿಶೀಲನೆ ಮಾಡಿದ್ದಾರೆ. ಕಟ್ಟಡವನ್ನು ಬಂದ್ ಮಾಡಿಸಿದ್ದರೂ, ಈಗಲೂ ಕಟ್ಟದ ಸುತ್ತಲಿನ ಜನರು ಪ್ರಾಣಪಾಯದಿಂದ ಬದುಕುತ್ತಿದ್ದಾರೆ. ಈ ಹಿಂದೆ ಕಟ್ಟಡ ಕುಸಿತಗೊಂಡು ನಾಲ್ಕು ಮಂದಿ ಮೃತಪಟ್ಟಿದ್ದರು. ಆದರೂ, ಇದರ ಮರು ನಿರ್ಮಾಣದ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಪಾರಂಪರಿಕ ಸಮಿತಿಯ ವರದಿ ಬಂದಿದ್ದು, ಕೋರ್ಟ್ ನೀಡಿರುವ ತಡೆಯನ್ನು ನಗರ ಪಾಲಿಕೆ ವತಿಯಿಂದ ತೆರವುಗೊಳಿಸಿ ಶೀಘ್ರ ಮರು ನಿರ್ಮಾಣಕ್ಕೆ ಸೂಚನೆ ನೀಡುವಂತೆ ವಿಧಾನ ಸಭಾಧ್ಯಕ್ಷರ ಮೂಲಕ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರಿಗೆ ಮನವಿ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಶಾಸಕ ನಾಗೇಂದ್ರ, ನಗರ ಪಾಲಿಕೆ ಆಯುಕ್ತರು, ಪುರಾತತ್ವ ಇಲಾಖೆ ಅಧಿಕಾರಿಗಳು ಮತ್ತು ಕಾನೂನು ಸಲಹೆಗಾರರನ್ನು ಕರೆಸಿ ಮಾತನಾಡಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.