ನಾಡೋಜ, ಹಂಪನಾರನ್ನು‌ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ಮಂಡ್ಯ ಪೋಲಿಸರು

Team Newsnap
1 Min Read

ದೆಹಲಿಯಲ್ಲಿ ರೈತರು ನಡೆಸಿದ ಹೋರಾಟದ ಬಗ್ಗೆ ಪ್ರಧಾನಿ‌ ಮೋದಿ ಹಾಗೂ ಕೇಂದ್ರ ಸರ್ಕಾರ ನಡೆಸಿ ಕೊಳ್ಳುತ್ತಿರುವ ರೀತಿಯನ್ನು ಟೀಕಿಸಿದರು‌ ಎಂಬ ಕಾರಣಕ್ಕಾಗಿ ಮಂಡ್ಯ ಪೋಲಿಸರು ಹಿರಿಯ ಸಾಹಿತಿ, ನಾಡೋಜ ಹಂ.ಪ.ನಾಗರಾಜಯ್ಯ( 85) (ಹಂಪನಾ) ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು.

ಮಂಡ್ಯದಲ್ಲಿ ಜ. 17 ನಡೆದ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ್ದ ಹಂಪನಾ, ಕೃಷಿ ಕಾನೂನುಗಳ ಬಗ್ಗೆ ಭಾಷಣ ಮಾಡಿ, ಮೋದಿ ಸರ್ಕಾರವನ್ನು ಟೀಕಿಸಿದ್ದರು.

ಕಳೆದ ಹಲವು ದಿನಗಳಿಂದ ರೈತರು ಚಳಿ-ಮಳೆಯನ್ನು ಲೆಕ್ಕಿಸದೆ ಬೀದಿಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಸೌಜನ್ಯಕ್ಕಾದರೂ ಪ್ರಧಾನಿಯವರು ರೈತರನ್ನು ಭೇಟಿ ಮಾಡಿ ಮಾತನಾಡಬಾರದೇ? ಸರ್ಕಾರ ಆಂತರ್ಯದಲ್ಲಿ ದುರ್ಯೋಧನನಂತೆ ವರ್ತಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದರು.

ಅದೇ ಕಾರಣಕ್ಕೆ ಹಂಪಾನ ಅವರನ್ನು ಠಾಣೆಗೆ ವಿಚಾರಣೆಗೆ ಕರೆಸಲಾಗಿತ್ತು ಎಂದು ಹಂಪನಾ ಪುತ್ರಿ ಆರತಿ ಹಂಪನಾ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಹಂಪಾನ ಅವರ ಭಾಷಣವನ್ನು ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಕಾರ್ಯಕರ್ತರಿಬ್ಬರು ಮಂಡ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಂತೆ. ಈ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿಯನ್ನು ಬೆಂಗಳೂರಿನಿಂದ ಮಂಡ್ಯದವರೆಗೆ ಕರೆಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಕನಿಷ್ಟ ಎಫ್‌ಐಆರ್ ಕೂಡ ದಾಖಲಾಗಿಲ್ಲ. ಇದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿ ಹಂಪನಾ ಅವರನ್ನು ಠಾಣೆಯವರೆಗೆ ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ.

ಇದೇ ರೀತಿ ಕೆ ಸಿ ರೆಡ್ಡಿ ಮುಖ್ಯಮಂತ್ರಿ ಆಗಿದ್ದ ವೇಳೆ ಕರ್ನಾಟಕದ ಏಕೀಕರಣ ಸಂಬಂಧಿಸಿದಂತೆ ಕುವೆಂಪು ಅವರಿಗೂ ಅಗಿನ ಸರ್ಕಾರ ನೋಟಿಸ್ ಜಾರಿ ಮಾಡಿದ್ದನ್ನು ಸ್ಮರಿಸಬಹುದು.

ದೂರು ಬಂದ ಹಿನ್ನೆಲೆಯಲ್ಲಿ ಹಂಪನಾ ಅವರನ್ನು ನಮ್ಮ ಅಧಿಕಾರಿಗಳು ಕರೆಸಿ ಹೇಳಿಕೆ ಪಡೆದಿದ್ದಾರೆ. ಮೋದಿ ವಿರುದ್ಧ ಹೇಳಿಕೆ ಕೊಟ್ಟಿಲ್ಲ. ಅವರ ಬಗ್ಗೆ ಗೌರವವಿದೆ. ದುರ್ಯೋದನ ಪದ ಬಳಸಿಲ್ಲವೆಂದು ಸ್ಪಷ್ಟೀಕರಣ‌ ನೀಡಿದ್ದಾರೆ. ಅವರನ್ನು ಗೌರವಯುತವಾಗಿಯೇ ನಡೆಸಿಕೊಂಡು ಕಳುಹಿಸಿಕೊಟ್ಟಿದ್ದೇವೆ.

  • ಕೆ.ಪರಶುರಾಮ್, ಎಸ್ಪಿ, ಮಂಡ್ಯ
Share This Article
Leave a comment