ಭಾರತದ ಸಂಸ್ಕೃತಿಯ ಸಂಕೇತ ಎಂದೇ ಭಾವಿಸಿರುವ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀ ರಾಮಮಂದಿರ ನಿರ್ಮಾಣದ ತಾಂತ್ರಿಕ ಮೇಲುಸ್ತುವಾರಿ ಸಮಿತಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಮೂಲದ ಟಿ.ಜಿ. ಸೀತಾರಾಮ್ ಸ್ಥಾನ ಪಡೆದು ಕೊಂಡಿದ್ದಾರೆ.
ತಳಕು ಗ್ರಾಮ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತನ್ನ ಹೆಸರನ್ನು ಅಚ್ಚಳಿಯದಂತೆ ದಾಖಲಿಸಿದೆ. ಟಿ.ಎಸ್.ವೆಂಕಣ್ಣಯ್ಯ ಮತ್ತು ಹೆಸರಾಂತ ಕಾದಂಬರಿಕಾರ ತರಾಸು ಅವರಿಂದ ಈ ಗ್ರಾಮಕ್ಕೆ ತನ್ನದೇ ಆದ ಮೆರಗು ಇದೆ. ಆದರೆ ಈಗ ಶ್ರೀ ರಾಮ ಮಂದಿರ ನಿರ್ಮಾಣದ ತಳಪಾಯದ ಮೇಲುಸ್ತುವಾರಿಯ ಎಂಟು ಜನ ತಜ್ಞರ ಸಮಿತಿಯಲ್ಲಿ ಕರ್ನಾಟಕ ಮೂಲದ ಟಿ.ಜಿ.ಸೀತಾರಾಮ್ ಸದಸ್ಯರಾಗಿ ಸ್ಥಾನ ಪಡೆದುಕೊಳ್ಳುವ ಮೂಲಕ ಈ ಘನತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಪ್ರಸ್ತುತ ಪ್ರೊ.ಟಿ.ಜಿ.ಸೀತಾರಾಮ್ ಅಸ್ಸಾಂನ ಗುವಾಹಟಿಯ ಐಐಟೆಯಲ್ಲಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಐಐಎಸ್ಸಿಯಲ್ಲಿನ ಇವರ ಕಾರ್ಯಕ್ಷಮತೆ ಹಾಗೂ ಜಿಯೋ ಟೆಕ್ನಿಕಲ್ ಎಂಜಿನಿಯರಿಂಗ್ನಲ್ಲಿ ಅವರ ಪರಿಣಿತಿಯ ಕಾರಣಕ್ಕೆ ಸಮಿತಿಯಲ್ಲಿ ಸದಸ್ಯರಾಗಿ ರಾಮ ಮಂದಿರ ನಿರ್ಮಾಣದ ನೇಮಕವಾಗಿದ್ದಾರೆ ಎನ್ನಲಾಗಿದೆ.
ಪ್ರೊ.ಟಿ.ಜಿ.ಸೀತಾರಾಮ್ ಹಿನ್ನೆಲೆ
ವತ್ಸಲಾ ಮತ್ತು ಟಿ.ಎಸ್.ಗುಂಡುರಾವ್ ದಂಪತಿಯ ಏಕೈಕ ಪುತ್ರರಾದ ಇವರು, ಜೂ .15.1962 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ತಳುಕಿನಲ್ಲಿ ಪಡೆದರು. ಪ್ರೌಢಶಿಕ್ಷಣವನ್ನು ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪೂರ್ವ ಅಧ್ಯಯನ ಮಾಡಿದ್ದಾರೆ .
ದಾವಣಗೆರೆಯ ಯುಬಿಡಿಟಿಯಲ್ಲಿ ಬಿಇ ಸಿವಿಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿ, ನಂತರ ಬೆಂಗಳೂರಿನ ಐಐಎಸ್ಸಿಯ ಟಾಟಾ ಇನ್ಸ್ಟಿಟ್ಯೂಟ್ನಲ್ಲಿ ಎಂಎಸ್ ಮುಗಿದ ನಂತರ ಕೆನಡಾದಲ್ಲಿ ಪಿಎಚ್ಡಿ ಅಧ್ಯಯನ ಮಾಡಿದ್ದಾರೆ .
ನಂತರ ಅಮೆರಿಕಾದ ಟೆಕ್ಸಾಸ್ನಲ್ಲಿ ಪ್ರಾಧ್ಯಾಪಕರಾಗಿ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅವರು, ಎಂಎಸ್ ಪಡೆದ ಐಐಎಸ್ಸಿಯಲ್ಲೇ ಪ್ರಾಧ್ಯಾಪಕ ಆರಂಭಿಸಿದ್ದರು. 20 ವರ್ಷಗಳ ಕಾಲ ಬೆಂಗಳೂರಿನ ಐಐಎಸ್ಸಿಯಲ್ಲಿ ಕಾರ್ಯನಿರ್ವಹಿಸಿ, ಕಳೆದ ಒಂದೂವರೆ ವರ್ಷದಿಂದ ಅಸ್ಸಾಂನ ಗುಹಾಟೆಯಲ್ಲಿನ ಐಐಟಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇಡೀ ದೇಶವೇ ರಾಮ ಮಂದಿರ ನಿರ್ಮಾಣವಾಗಬೇಕೆಂದು ಕನಸು ಕಂಡಿತ್ತು. ಹೀಗಿರುವಾಗ ರಾಮ ಮಂದಿರ ನಿರ್ಮಾಣದ ತಳಪಾಯ ತಜ್ಞರ ಸಮಿತಿಯ ಎಂಟು ಜನ ಸದಸ್ಯರ ಪೈಕಿ ನನ್ನ ಪುತ್ರನೂ ಆಯ್ಕೆ ಮಾಡಿಕೊಂಡಿರುವುದು ಸಂತೋಷ ತಂದಿದೆ ಎಂದು ತಂದೆ ನಿವೃತ್ತ ಅಭಿವೃದ್ಧಿ ಅಧಿಕಾರಿ ಟಿ.ಎಸ್.ಗುಂಡುರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಮಮಂದಿರ ಕೆಲಸಕ್ಕಾಗಿ ತಜ್ಞರ ಸಮಿತಿಯಲ್ಲಿ ನನ್ನ ಸಹೋದರನನ್ನು ಕೇಂದ್ರ ಸರಕಾರ ಆಯ್ಕೆ ಮಾಡಿರುವುದು ತುಂಬಾ ಖುಷಿಯಾಗಿದೆ. ತನಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವರು ಸಹೋದರಿ ಪುಷ್ಪಾ ಪ್ರಶಂಸಿಸಿದರು.