ಸಿಡಿ ಮಾಡುವುದು ಅಪರಾಧವಾಗಿದೆ ಯಾರು ಸಿಡಿ ಮಾಡಿ ಸಿಎಂ ಯಡಿಯೂರಪ್ಪ ಅವರಿಗೆ ಬ್ಲಾಕ್ಮೇಲ್ ಮಾಡುತ್ತಿದ್ದಾರೋ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಶುಕ್ರವಾರ ಮೈಸೂರಿನಲ್ಲಿ ಒತ್ತಾಯಿಸಿದರು.
ಕರ್ನಾಟಕ ಇತಿಹಾಸದಲ್ಲಿ ಸಿಡಿ ಪುರಾಣ ಕೇಳುತ್ತಿರುವುದು ಮೊದಲ ಬಾರಿಗೆ. ಇದು ಕರ್ನಾಟಕಕ್ಕೆ, ವಿಧಾನಸೌಧಕ್ಕೆ ಕಳಂಕ ತರುವ ಕೆಲಸ. ರಸ್ತೆಯಲ್ಲಿ ಹೋಗಿರುವವರು ಮಾಡುತ್ತಾರೆ ಎಂದರೆ ಹೋಗಲಿ ಅನ್ನಬಹುದಿತ್ತು. ಆದರೆ ಆಡಳಿತ ಪಕ್ಷದವರೇ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು.
ಇದೊಂದು 420 ಪ್ರಕರಣ. ಸಿಡಿ ಮಾಡಿದವರನ್ನು ಬಂಧಿಸಿ ಜೈಲಿಗೆ ಹಾಕಲೇಬೇಕು. ರಾಜ್ಯದ ಮುಖ್ಯಮಂತ್ರಿಗೆ ಸಿಡಿ ಮಾಡಿ ಬೆದರಿಕೆ ಹಾಕುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ. ಇದನ್ನ ರಾಷ್ಟ್ರಪತಿಗಳು ಗಮನಿಸಬೇಕು ಎಂದರು.