ಪ್ರೀತಿಸಿ, ಮದುವೆಯಾದ ಗಂಡನಿಂದ ದೂರವಾಗಲು ಬಯಸದ ಯುವತಿ ಆತ್ಮಹತ್ಯೆಗೆ ಯತ್ನ‌

Team Newsnap
1 Min Read

ಅಂತರ್ಜಾತಿ ವಿವಾಹವಾಗಿದ್ದಕ್ಕೆ ವಿರೋಧ ಹಾಗೂ ಹುಡುಗನಿಂದ ದೂರ ಆಗಬೇಕು ಎಂಬ ಕುಟುಂಬಸ್ಥರ ಒತ್ತಡದಿಂದ ಮನನೊಂದ ಯುವತಿ ಸಂಗಮ್ ಕುಮಾರಿ ಎಂಬಾಕೆ ಕೋರ್ಟ್ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಯುವತಿ ಬಿಹಾರದ ಬೇಗುಸರೈ ಮೂಲದವಳು. ಈಕೆ ಕೋರ್ಟ್ ಕಟ್ಟಡದ ಮೊದಲ ಮಹಡಿಯಿಂದ ಹಾರಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಸದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಈ ಯುವತಿ ತನ್ನ ಪ್ರಿಯಕರನ ಜೊತೆ ಓಡಿ ಹೋಗಿ ಮದುವೆಯಾಗಿದ್ದಳು. ಇತ್ತ ಆಕೆಯ ಪೋಷಕರು ದಂಡಾರಿ ಪೊಲೀಸ್ ಠಾಣೆಯಲ್ಲಿ ಅಪಹರಣ ಕೇಸ್ ದಾಖಲಿಸಿದ್ದರು. ಮಗಳು ಅಪ್ರಾಪ್ತೆ ಅಂತಾನೂ ದೂರಿದ್ದಳು. ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು.

ಪ್ರಣವ್ ಕುಮಾರ್ ಹಾಗೂ ಸಂಗಮ್ ಕುಮಾರಿ, ಕತರ್ಮಾಲಾ ಗ್ರಾಮದ ನಿವಾಸಿಗಳು. 2019ರ ಫೆಬ್ರವರಿ 10ರಂದು ಇಬ್ಬರೂ ಓಡಿಹೋಗಿ ಮದುವೆಯಾಗಿದ್ದರು. ಇದಾದ ಬಳಿಕ 2021ರ ಜನವರಿ 12 ರಂದು ಪೊಲೀಸರು ದಂಪತಿಯನ್ನು ವಶಕ್ಕೆ ವಿಚಾರಣೆಗೆ ಒಳಪಡಿಸಿದ್ದರು.‌

ಈ ವೇಳೆ ಪೊಲೀಸರು ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ತಿಳಿಸಿದ್ದಾರೆ. ಆದರೆ ಯುವತಿ ಇದಕ್ಕೆ ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಕೋರ್ಟಿಗೆ ಹಾಜರುಪಡಿಸಿದ್ದಾರೆ. ಇಲ್ಲಿ ತನ್ನ ಹೇಳಿಕೆ ದಾಖಲಿಸಿದ ಬಳಿಕ ಯುವತಿಯ ಪೋಷಕರು ಪ್ರಿಯತಮನಿಂದ ದೂರ ಇರುವಂತೆ ಒತ್ತಡ ಹಾಕಿದ್ದಾರೆ. ಈ ವೇಳೆ ಯುವತಿ ಪೋಷಕರನ್ನು ಎದುರು ಹಾಕಿಕೊಳ್ಳಲು ಹಾಗೂ ಪತಿಯಿಂದ ದೂರ ಇರಲು ಸಾಧ್ಯವಾಗದೆ ಕೋರ್ಟ್ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.

Share This Article
Leave a comment