ನಾವು ಯಡಿಯೂರಪ್ಪ ಅವರಿಂದ ಇದನ್ನ ನಿರೀಕ್ಷಿಸಿರಲಿಲ್ಲ. ಅವರು ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರೇ ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನು ಸಿದ್ಧಲಿಂಗೇಶ್ವರ ಕ್ಷಮಿಸೋದಿಲ್ಲ. ನಿಮ್ಮನ್ನು ಸಿಎಂ ಮಾಡಿದ್ದೇ ಈ 17 ಜನ. ನಿಮ್ಮ ಸಂಪುಟದಲ್ಲಿ ಮುಸ್ಲಿಂ ಸೇರಿದಂತೆ ಎಲ್ಲ ಜಾತಿವರೂ ಇರಬೇಕು. ಆದರೆ ಎಲ್ಲಾ ಏನಾಯ್ತು ಎಂದು ಪ್ರಶ್ನಿಸಿದರು.
ನಾಡಿನಲ್ಲಿ ನಾಲಿಗೆ ತಪ್ಪದ ನಾಯಕ ಅಂತ ಬಿರುದು ಕೊಟ್ಟಿದ್ದು ನಾವೇ. ತಾವು ಕೊಟ್ಟ ಮಾತು ಉಳಿಸಿಕೊಂಡಿಲ್ಲ. 17 ಮಂದಿ ಭಿಕ್ಷೆಯಲ್ಲಿ ಸರ್ಕಾರ ಇದೆ. ಅವರ ತ್ಯಾಗದಿಂದ ಸರ್ಕಾರ ಬಂದಿದೆ, ಅದನ್ನು ನೆನಪಿಸಿಕೊಳ್ಳಿ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಯಾವ ನಾಯಕನಿಗೂ ಕೃತಜ್ಞತೆ ಎಂಬುದಿಲ್ಲ. ಸಿದ್ದರಾಮಯ್ಯರನ್ನು ಕರೆದುಕೊಂಡು ಬಂದ್ವಿ, ಅವರು ಹೇಳಲಿಲ್ಲ. ಯಡಿಯೂರಪ್ಪರಿಗೆ ತ್ಯಾಗ ಮಾಡಿದ್ವಿ, ಅವರೂ ಹೇಳಲಿಲ್ಲ. ಬಿಎಸ್ವೈ ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.