ಶಿಕಾರಿಪುರದಲ್ಲಿ ನಾನೊಬ್ಬ ಪುರಸಭಾ ಸದಸ್ಯನಾಗಿ ರಾಜಕೀಯ ಜೀವನ ಪ್ರಾರಂಬಿಸಿದೆ. ಮುಖ್ಯಮಂತ್ರಿಯಾಗುವೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಅನೇಕ ಹೋರಾಟದ ಫಲವಾಗಿ ಅದು ಸಾಧ್ಯವಾಯಿತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮೈಸೂರಿನಲ್ಲಿ ನಡೆದ ಜನ ಸೇವಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸಾಧ್ಯವಾದದ್ದು ಯಾವುದೂ ಇಲ್ಲ. ಗುರಿ ಮುಟ್ಟಬೇಕು ಎಂಬ ಸಂಕಲ್ಪ ಮುಖ್ಯ. ಅದೆಷ್ಟು ಹೋರಾಟಗಳು ನಡೆಸಿ ರಾಜ್ಯದ ಉದ್ದಗಲಕ್ಕೂ ಅಲೆದಿದ್ದೇನೆ. ಬಿಜೆಪಿ ಪಕ್ಷವನ್ನು ಗ್ರಾಮೀಣ ಪ್ರದೇಶದ ರೈತ ಪಕ್ಷವಾಗಿ ಮಾಡಿದ್ದೇವೆ ಎಂದು ತಿಳಿಸಿದರು.
ಮೈಸೂರು- ಚಾಮರಾಜನಗರ ಭಾಗದಲ್ಲಿ ಪಕ್ಷದ ಮತ್ತಷ್ಟು ಬೆಳೆಯಬೇಕಿದೆ. ಬೇರೆ ಜಿಲ್ಲಿಗೆ ಹೋಲಿಸಿದರೆ ಈ ಭಾಗದಲ್ಲಿ ಒಂದೆಜ್ಜೆ ಹಿಂದೆ ಇದ್ದೇವೆ. ಪಕ್ಷವನ್ನು ಬಲಪಡಿಸುವ ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂದು ಸಾಭೀತುಪಡಿಸೋಣ ಎಂದು ನೆರೆದಿದ್ದ ಕಾರ್ಯಕರ್ತರಿಗೆ ಕರೆ ನೀಡಿದರು.
ಕಾಂಗ್ರೆಸ್ ಪಕ್ಷವನ್ನು ನಾನು ಟೀಕಿಸುವುದಿಲ್ಲ.
ನಾನು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುವುದಿಲ್ಲ. ಎಲ್ಲಿದೆ ಕಾಂಗ್ರೆಸ್ ಪಕ್ಷ? ಯಾತಕ್ಕಾಗಿ ಅವರನ್ನು ಟೀಕೆ ಮಾಡಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಅವರ ನಾಯಕತ್ವ ಇಲ್ಲ. ಹಾಗಾಗಿ ಇಂತವರ ಬಗ್ಗೆ ಮಾತನಾಡುವುದು ನಮಗೆ ಶೋಭೆ ತರುವುದಿಲ್ಲ. ಹಾಗಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.