ಗ್ರಾಪಂ ಚುನಾವಣೆಯಲ್ಲಿ ಗೆದ್ದ ಸದಸ್ಯರನ್ನು ಜೇನುಕಲ್ ಬೆಟ್ಟದಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಪ್ರಮಾಣ ಮಾಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ಬೆಂಬಲದಿಂದ ಗೆದ್ದ ಸದಸ್ಯರು, ಬೇರೆಯವರ ಬಳಿ ಹೋಗದಂತೆ ಆಣೆ ಪ್ರಮಾಣ ಮಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ದೇವಸ್ಥಾನ ಮುಂದೆ ಶಾಸಕ ಶಿವಲಿಂಗೇಗೌಡ ನಿಂತಿದ್ದಾರೆ.ಅವರ ಬಳಿ ಬರುವ ಸದಸ್ಯರು ದೇವರಿಗೆ ಕರ್ಪೂರ ಹಚ್ಚಿ ನಿಮ್ಮನ್ನು ಬಿಟ್ಟು ಹೋಗಲ್ಲ ಎಂದು ಹೇಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರಸೀಕೆರೆಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಪದೇ ಪದೇ ಶಿವಲಿಂಗೇಗೌಡ ಮತ್ತು ಸಂತೋಷ್ ನಡುವೆ ರಾಜಕೀಯವಾಗಿ ಕಿತ್ತಾಟ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಶಾಸಕರು ಆಣೆ ಪ್ರಮಾಣ ಮಾಡಿಸಿರಬಹುದೆಂಬ ಟೀಕೆ ವ್ಯಕ್ತವಾಗುತ್ತಿದೆ.