ನೀವು ಮುಂದಿನ ಮುಖ್ಯಮಂತ್ರಿ ಯಾಗಲು ನಾನು ಜೈಕಾರ ಕೂಗುವುದಿಲ್ಲ ಬದಲಿಗೆ ಕುರುಬ ಸಮಾಜವನ್ನು ಎಸ್ ಟಿ ವರ್ಗಕ್ಕೆ ಸೇರಿಸಲು ನಡೆಸುವ ಹೋರಾಟಕ್ಕೆ ನೀವು ನಾಯಕತ್ವ ವಹಿಸಿ. ನಾವು ನಿಮ್ಮ ಹಿಂದೆ ಇರುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಶುಕ್ರವಾರ ಕರೆ ನೀಡಿದರು.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವಿಶ್ವನಾಥ್, ಸಿದ್ದರಾಮಯ್ಯ ಅವರೇ ಕುರುಬರ ಎಸ್.ಟಿ.ಹೋರಾಟಕ್ಕೆ ನಾಯಕತ್ವ ವಹಿಸಿಬೇಕು. ನಾವು ನಿಮ್ಮ ಹಿಂದೆ ಬರುತ್ತೇವೆ. ನೆನಪಿರಲಿ ನಿಮ್ಮನ್ನು ಕರೆಯುತ್ತಿರುವುದು ರಾಜಕೀಯ ನಾಯಕತ್ವಕ್ಕಲ್ಲ, ಸಮಾಜದ ನಾಯಕತ್ವಕ್ಕೆ ಮಾತ್ರ. ಎಂದರು.
ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಜೈಕಾರ ಕೂಗಲು ತಯಾರಿಲ್ಲ. ಸಮಾಜದ ಅಭಿವೃದ್ಧಿಗಾಗಿ ನಿಮ್ಮನ್ನು ಕರೆಯುತ್ತಿದ್ದೇವೆ. ನೀವು ಬನ್ನಿ ಎಂದು ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದರು.
ಇಡೀ ಕುರುಬ ಸಮುದಾಯ ನಿಮ್ಮ ರಾಜಕೀಯ ಏಳಿಗೆಗೆ ತನು-ಮನ-ಧನ ಅರ್ಪಿಸಿದೆ. ಕುರಿ ಮಾರಿ ದುಡ್ಡು ಕೊಟ್ಟಿದ್ದಾರೆ. ಬೇರೆ ಸಮುದಾಯದವರೂ ನಿಮಗೆ ಬೆಂಬಲ ನೀಡಿದ್ದಾರೆ. ನೀವು ಕುರುಬ ಸಮುದಾಯಕ್ಕೆ ವಾಪಸ್ ಏನು ಕೊಟ್ಟಿದ್ದೀರಿ ? ನಮ್ಮೆಲ್ಲರ ತ್ಯಾಗದಿಂದ ನೀವು ಮುಖ್ಯಮಂತ್ರಿಯಾದಿರಿ. ಆ ದೊಡ್ಡಮಟ್ಟಕ್ಕೆ ಬೆಳೆದಿರುವ ನೀವು ಕುರುಬರ ಎಸ್.ಟಿ. ಹೋರಾಟದಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಹೇಳಿದರು.
ಈ ಹೋರಾಟವನ್ನು ಆರ್ಎಸ್ಎಸ್ ಹೈಜಾಕ್ ಮಾಡುತ್ತಿದೆ ಎಂದಾಗಲಿ ಅಥವಾ ತಮ್ಮ ನಾಯಕತ್ವವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಭಾವಿಸಬಾರದು. ಒಂದು ವೇಳೆ ನಿಮ್ಮ ನಾಯಕತ್ವವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದಾದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನನ್ನ ಹಿರಿತನವನ್ನು ಬದಿಗಿಟ್ಟು ನೀವು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿತ್ತಾ. ಆಗಲೇ ನಾನು ನಾಯಕತ್ವ ಬಿಟ್ಟುಕೊಟ್ಟಿದ್ದೇನೆ. ಈಗಲೂ ಬಿಟ್ಟುಕೊಡುತ್ತೇವೆ. ನೀವು ಸೋತಿದ್ದಾಗ ನಾನು ಮಂತ್ರಿಯಾಗಿದ್ದೆ. ಆಗಲೂ ನೀವೇ ನಮ್ಮ ನಾಯಕ ಎಂದೇ ಕರೆಯುತ್ತಿದ್ದೆ ಎಂದು ವಿಶ್ವನಾಥ್ ಹೇಳಿದರು