ತಮ್ಮ ನೂರಕ್ಕೂ ಹೆಚ್ಚು ಕೃತಿಗಳಲ್ಲಿ ವಿಚಾರ ಕ್ರಾಂತಿಗೆ ಒತ್ತು ನೀಡಿ ವೈಚಾರಿಕ ಪ್ರಜ್ಞೆಯನ್ನು ಬಿತ್ತುವ ಮೂಲಕ ವಿಶ್ವಮಾನವರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ಅವರ ೧೨೦ನೇ ಜಯಂತಿ ಅಂಗವಾಗಿ ಪ್ರಸ್ತುತಪಡಿಸಿರುವ ಸದರಿ ಲೇಖನದಲ್ಲಿ ಅವರ ಹುಟ್ಟು ಮತ್ತು ಸಾವಿನ ಕುರಿತು ಮಾಹಿತಿ ನೀಡುವುದಕ್ಕಿಂತ ಕುವೆಂಪು ಅವರು ನಮಗೆ ಇಂದಿಗೂ ಏಕೆ ಪ್ರಸ್ತುತ, ಕನ್ನಡ ನಾಡಿಗೆ ಅವರ ಕೊಡುಗೆ ಏನು, ಮುಂದಿನ ಪೀಳಿಗೆ ಅವರನ್ನು ಏಕೆ ಸ್ಮರಿಸಿಕೊಳ್ಳಬೇಕು ಎಂಬುದರ ಬಗ್ಗೆ ಒಂದಿಷ್ಟು ವಿಚಾರಗಳನ್ನು ªಸಾಹಿತಿಯನ್ನು ಸಾಹಿತ್ಯಾಸಕ್ತರಿಗಾಗಿ ಮತ್ತು ನಾಡಿನ ಸಮಸ್ತ ಜನತೆಗಾಗಿ ಹಂಚಿಕೊಳ್ಳಲಾಗಿದೆ.
ಕುವೆಂಪು ಅವರು ಕನ್ನಡ ನಾಡಿನ ಪ್ರಸಿದ್ಧ ಕವಿ, ಕಾದಂಬರಿಕಾರ, ನಾಟಕಕಾರ, ರಾಮಾಯಣ, ಮಹಾಭಾರತದಂತಹ ಮಹಾ ಕಾನ್ಯದ ನಂತರ ಬೇರೆ ಯಾರಿಂದಲೂ ಮಹಾ ಕಾವ್ದ ರಚನೆ ಆಗಲು ಸಾಧ್ಯವಿಲ್ಲವೆಂಬ ಮಾತು ಸುಳ್ಳಾಗಿಸಿ ಮೂಲ ರಾಮಾಯಣಕ್ಕೆ ಚ್ಯುತಿ ಬರದಂತೆ ಹಾಗೂ ಸಾಮಾನ್ಯ ಜನರಿಗೆ ರಾಮಾಯಣದ ಬಗ್ಗೆ ಪ್ರೀತಿ ಮತ್ತು ಗೌರವ ಹೆಚ್ಚಾಗುವ ರೀತಿಯಲ್ಲಿ ಶ್ರೀ ರಾಮಾಯಣ ದರ್ಶಣ ಕೃತಿಯನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ದೈತ್ಯ ಪ್ರತಿಭೆ ಎನಿಸಿಕೊಂಡಿದ್ದಾರೆ.
ಕುವೆಂಪು ಇತರರಂತೆ ಸಾಹಿತ್ಯ ರಚನೆ ಮಾಡಿದ್ದರೆ ಅವರು ವಿಶ್ವ ಮಾನವ ಎಂದು ಖ್ಯಾತಿ ಸಂಪಾದನೆ ಮಾಡಲು ಆಗುತ್ತಿರಲಿಲ್ಲ, ನುಡಿದಂತೆ ನಡೆದಿದ್ದಾರೆ, ತಾವು ಬರೆದ ಸಾಹಿತ್ಯದಲ್ಲಿ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣಬೇಕು, ಜಾತಿ,ವರ್ಗದಿಂದ ಅಳೆಯದೆ ಎಲ್ಲರನ್ನು ಪ್ರೀತಿಸಬೇಕು, ಎಲ್ಲರ ಒಳತಿಗಾಗಿ ಸೇವೆ ಮಾಡಬೇಕೆಂಬುದನ್ನು ಹೇಳಿರುವುದರಿಂದ ಕುವೆಂಪು ವಿಶೇಷ ವ್ಯಕ್ತಿಯಾಗಿ ಕಾಣುತ್ತಾರೆ.
ಕುವೆಂಪು ಎಲ್ಲರಂತೆ ಕವಿ, ಕಾದಂಬರಿಗಾರ ಆಗಿದ್ದರೆ ಯಾರೂ ಸಹ ಅವರ ಬಗ್ಗೆ ಚಿಂತನೆ ಮಾಡುತ್ತಿರಲಿಲ್ಲ, ಕುವೆಂಪು ಅವರು ಇಂದಿಗೂ ಪ್ರಸ್ತುತವಾಗಲು ಅವರಲ್ಲಿದ್ದ ಕನ್ನಡ ಪ್ರೇಮ, ಪರಿಸರ ಪ್ರೇಮ, ಮಾನವತಾವಾದ ಹಾಗೂ ವೈ ಚಾರಿಕತೆಯ ಜ್ಞಾನ ಪ್ರಮುಖವಾದದ್ದು.
ಕುವೆಂಪು ಅವರು ತಮಗಾಗಿ ಕನ್ನಡವನ್ನು ಆರಾಧಿಸಿದ್ದರೆ ಜಗದ ಕವಿ, ಯುಗದ ಕವಿ ಆಗುತ್ತಿರಲಿಲ್ಲ, ಕನ್ನಡವನ್ನು ಪ್ರತಿಯೊಬ್ಬರು ಪ್ರೀತಿಸುವಂತೆ, ಗೌರವಿಸುವಂತೆ ಮಾಡಿದ್ದು ವಿಶೇಷ.
ಇಂದು ನಾಡಿನ ಪ್ರತಿ ಊರಿನಲ್ಲಿ, ಗಲ್ಲಿ ಗಲ್ಲಿಗಳಲ್ಲಿ: ಜಯ ಭಾರತ ಜನನಿಯ ತನುಜಾತೆ, ಜಯಯೇ ಕರ್ನಾಟಕ ಮಾತೆ…” ಎಂದು ಹೇಳುವ ನಾಡ ಗೀತೆ ವಿಶ್ವದ ಗಮನ ಸೆಳೆದಿದ್ದು ಇದು ಕುವೆಂಪು ಕನ್ನಡಕ್ಕೆ ನೀಡಿದ ಅಪಾರ ಕೊಡುಗೆ ಎಂದರೆ ತಪ್ಪಾಗಲಾರದು.
ರೈತರ ಬದುಕು, ಬವಣೆ ಬಗ್ಗೆ ಇದ್ದ ಕಾಳಜಿ ಹಾಗೂ ರೈತರ ಮೇಲಿನ ಗೌರವಕ್ಕಾಗಿ ರೈತ ಗೀತೆಯನ್ನು ರಚಿಸುವ ಮೂಲಕ ಮಾದರಿ ಕವಿಯಾಗಿದ್ದಾರೆ.
ಕುವೆಂಪು ಕೇವಲ ಕನ್ನಡದ ಮೇಲೆ ಪ್ರೀತಿ ತೋರಿ ದೊಡ್ಡ ವ್ಯಕ್ತಿ ಅನಿಸಿಕೊಂಡಿಲ್ಲ, ಅವರಲ್ಲಿದ್ದ ಪರಿಸರ ಪ್ರೇಮವೂ ದೈತ್ಯ ಪ್ರತಿಭೆಗೆ ಸಾಕ್ಷಿಯಾಗಿದೆ.
ಪರಿಸರವನ್ನೇ ದೇವರು ಎಂದು ಭಾವಿಸಿದ್ದ ಕುವೆಂಪು ಕಾಡಿನ ಸಂಪತ್ತು ಉಳಿಸಲು ತಮ್ಮ ಸಾಹಿತ್ಯದಲ್ಲಿ ಜಾಗ ನೀಡಿದ್ದಾರೆ, ಮಲೆನಾಡಿನ ಕೂವರರಾದ ಕುವೆಂಪು “ಮಲೆಗಳಲ್ಲಿ ಮದುಮಗಳು” ಹಾಗೂ “ಕಾನೂರು ಹೆಗ್ಗಡತಿ ಕಾದಂಬರಿ” ರಚಿಸಿ ಪರಿಸರದ ಮೇಲೆ ಅವರಿಗಿರುವ ಕಾಳಜಿ ಮತ್ತು ಪ್ರೀತಿಯನ್ನು ಸಾಕ್ಷಿಕರಿದ್ದಾರೆ.
ಕುವೆಂಪು ಅವರು ಏಕೆ ಪ್ರಸ್ತುತ ಎಂಬುದಕ್ಕೆ ಮತ್ತೊಂದು ಉತ್ಕೃಷ್ಠ ಕಾರಣವೆಂದರೆ ಅವರಲ್ಲಿದ್ದ ಮಾನವ ಪ್ರೇಮ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡಬೇಕು, ಜಾತಿಯಿಂದ ಮನುಷ್ಯನ ಯೋಗ್ಯತೆಯನ್ನು ಅಳೆಯಬಾರದು, ಜಾತಿ ಎಂಬ ಕಾರಣಕ್ಕೆ ದೂರ ಇಡಬಾರದು, ಜಾತಿ ಮನು ವಿರೋಧಿ ಆಗಬರದು ಎಂದು ಕುವೆಂಪು ತಮ್ಮ ಕೃತಿಗಳಲ್ಲಿ ಪ್ರತಿಪಾದಿಸುವ ಮೂಲಕ ಮಾನವ ಪ್ರೀತಿಯನ್ನು ಮೆರೆದಿದ್ದಾರೆ. ಇದು ಅವರು ರಚಿಸಿರುವ ಓ ನನ್ನ ಚೇತನ, ಆಗು ನೀ ಅನಿಕೇತನ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ಜಲಗಾರ, ಮನುಜ ಮತ ವಿಶ್ವಪಥ, ಬೆರಳ್ಗೆ ಕೊರಳ್ ಕೃತಿಗಳಲ್ಲಿ ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ.
ಇನ್ನು ಮೂಡನಂಬಿಕೆ ವಿರುದ್ಧ ಜಾಗೃತಿ ಮೂಡಿಸಲು ಅವರು ಬರೆದಿರುವ ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಭೆಯನ್ನು ಪೂಜಿಸೋಣ ಎಂಬ ಹಾಡು ವೈಚಾರಿಕತೆಯ ಅವಶ್ಯಕತೆಯನ್ನು ತಿಳಿಸಿಕೊಟ್ಟಿದೆ.
ಕುವೆಂಪು ನೂರು ದೇವರನ್ನು ನೂಕಾಚೆ ಎಂದು ಕವಿತೆ ಬರೆದ ಮಾತ್ರಕ್ಕೆ ಅವರು ನಾಸ್ತಿಕರಾಗಿದ್ದರು ಎಂದರ್ಥವಲ್ಲ, ದೇವರ ಹೆಸರಲ್ಲಿ ನಡೆಯುವ ಅನಾಚಾರಗಳ ಬಗ್ಗೆ ವಿಸ್ಕೃತವಾಗಿ ತಿಳಿಸಿ ಭರತಾಂಭೆಗಿAತ ಯಾರೂ ದೊಡ್ಡವರಲ್ಲವೆಂದು ಪ್ರತಿಪಾದಿಸಿ ಜಗತ್ತಿನ ತಮನ ಸೆಳೆದಿದ್ದಾರೆ.
ಇದೇ ರೀತಿ ಮಂದಿರ,ಮಸೀದಿ, ಚರ್ಚ್ಗಳಿಂದ ಹೊರ ಬಂದು ಹೊರಗೆ ಇರುವ ಬಡವರನ್ನೇ ದೇವರೆಂದು ಕಾಣಿ, ಇವರನ್ನು ಪ್ರೀತಿಸಿ, ಸೇವೆ ಮಾಡಿ ಎಂದು ಸಂದೇಶ ನೀಡುವ ಮೂಲಕ ಮನು ಕುಲದ ಕರ್ತವ್ಯಗಳನ್ನು ತಿಳಿಸಿಕೊಟ್ಟಿದ್ದಾರೆ.
ವಿಶ್ವಮಾನವರಾಗೊಣ:
ಈ ಎಲ್ಲಾ ಕಾರಣಕ್ಕೆ ಕುವೆಂಪು ನಮಗೆ ಪ್ರಸ್ತುವಾಗಿದ್ದು ಕುವೆಂಪು ಅವರ ಜಯಂತಿ ದಿನ, ಪುಣ್ಯ ಸ್ಮರಣೆ ದಿನ ಅವರನ್ನು ಹಾಡಿ ಹೊಗಳಿ ಕರ್ತವ್ಯ ಮರೆಯುವ ಬದಲು “ಇರಬೇಕು ಇರುವಂತೆ ತೊರೆದು ಸಾವಿನ ಚಿಂತೆ … ಮಳೆ ಸುರಿಸಿ ಹಗುರಾದ ಮುಗಿಲಿನಂತೆ…
ತಾನು ಬಿಸಿಲಿನಲ್ಲಿ ನಿಂತು ತನ್ನ ಬಳಿ ಬರುವವರಿಗೆ ತಣ್ಣನೆಯ ಆಸರೆಯ ನೆರಳ ಕೊಟ್ಟು… ಎಂಬ ಕವಿತೆಯನ್ನು ಅರ್ಥ ಮಾಡಿಕೊಂಡು ಬದುಕಿದರೆ ಮನುಜ ಧರ್ಮ ಧರ್ಮದ ಕಿಮ್ಮತ್ತು ಹೆಚ್ಚುತ್ತದೆ ಎಂಬುದನ್ನು ಅರಿತು ಬಾಳಿದರೆ ವಿಶ್ವ ಮಾನವ ಸಂದೇಶ ಮುಂದಿನ ಪೀಳಿಗೆಗೆ ವರದಾನವಾಗುತ್ತದೆ.
_ಐದು ದಶಕಗಳಿಂದ ಶ್ರೀ ಕುವೆಂಪು ಸಾಹಿತ್ಯ ಕನ್ನಡ ನಾಡಿನ ಜನಮನವನ್ನು ತಣಿಸುತ್ತಾ, ಹುರಿದುಂಬಿಸುತ್ತಾ, ಹಸನುಗೊಳಿಸುತ್ತಿದೆ, ಅವರ ವಿಚಾರಶಕ್ತಿಯನ್ನು ಕೆರಳಿಸುತ್ತಾ, ನಿರಂಕುಶ ಮತಿತ್ವದ ಅವಶ್ಯಕತೆ, ಅನಿವಾರ್ಯತೆಯನ್ನು ನೆನಪಿಗೆ ತಂದುಕೊಡುತ್ತಿದೆ, ಅವರ ಬದುಕಿಗೊಂದು ತಾರಕಮಂತ್ರವಾಗಿ ಧ್ರುವತಾರೆಯಾಗಿ ಸಂಜೀವನಶಕ್ತಿಯಾಗಿ ಅದನ್ನು ತಿದ್ದುತ್ತಿದೆ, ಉನ್ನತಗೊಳಿಸುತ್ತಿದೆ, ಭಾರತೀಯರ ಸುಖ ದುಃಖ, ಆಶೆ ಆಕಾಂಕ್ಷೆ, ಕನಸು ನನಸು ಗಳನ್ನು ಪ್ರತಿಬಿಂಬಿಸುವ ಮೂಲಕ ಅವರ ನಾಡಿಯನ್ನು ಮಿಡಿದಿದೆ.-ದೇಜೆಗೌ
-ಮೊದಲಿನಿಂದಲೂ ಪುಟ್ಟಪ್ಪನವರ ಪ್ರಮುಖ ಪ್ರವೃತ್ತಿ, ಪ್ರಥಮ ಆಸಕ್ತಿ ಅಧ್ಯಾತ್ಮ. ಅವರು ಜನ್ಮ ತಾಳಿದ್ದು ಇತರ ಕೋಟ್ಯಂತರ ಜನರಂತೆ ಸುಮ್ಮನೆ ಬದುಕಿ, ಬಾಳಿ ಹೋಗಲಿಕ್ಕಲ್ಲ ಎಂಬ ಆತ್ಮ ಪ್ರತ್ಯಯ – ಆತ್ಮಜ್ಞಾನ – ಪುಟ್ಟಪ್ಪನವರಿಗೆ ಚಿಕ್ಕಂದಿನಿAದಲೇ ಉಂಟಾಗಿತ್ತು. ಆದ್ದರಿಂದ ಮಾನವ ಜನ್ಮೋದ್ದೇಶವಾದ ಕನ್ನಡ, ಕರ್ನಾಟಕ ಅವರ ಜೀವದ ಎರಡು ಶ್ವಾಸಕೋಶಗಳು. ಆ ಶ್ವಾಸಕೋಶಗಳ ಚಲನೆ ನಿಂತರೆ ಅವರ ಬಾಳುಸಿರೇ ನಿಂತಂತೆ.-
ಕೋ.ಚೆನ್ನಬಸಪ್ಪ.
ವಿಶೇಷ ಲೇಖನ:
ಪಾ.ಶ್ರೀ.ಅನಂತರಾಮ್
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು