October 22, 2024

Newsnap Kannada

The World at your finger tips!

siddarama

ಪೊಲೀಸರ ಮಕ್ಕಳಿಗಾಗಿ ರಾಜ್ಯದಲ್ಲಿ 7 ಪಬ್ಲಿಕ್ ಶಾಲೆಗಳ ಸ್ಥಾಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Spread the love

ಬೆಂಗಳೂರು: ರಾಜ್ಯದ ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯಗಳನ್ನು ಮುಕ್ತವಾಗಿ ಮತ್ತು ಸ್ವತಂತ್ರವಾಗಿ ನಿಭಾಯಿಸಲು ಸರ್ಕಾರವು ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಪೊಲೀಸ್ ಸಂಸ್ಮರಣಾ ದಿನದಂದು ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು. ಜನರ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸುವ ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕಾಗಿ ಸರ್ಕಾರ ಬದ್ದವಾಗಿದೆ ಎಂದು ಸ್ಪಷ್ಟಪಡಿಸಿದರು.

ಸಿಎಂ ಸಿದ್ದರಾಮಯ್ಯ ಅವರು 2025ರಲ್ಲಿ 10,000 ಪೊಲೀಸ್ ವಸತಿ ಮನೆಗಳ ನಿರ್ಮಾಣಕ್ಕೆ ₹2,000 ಕೋಟಿ ಅನುದಾನವನ್ನು ನೀಡಲಾಗಿದ್ದು, 200 ಕೋಟಿ ವೆಚ್ಚದಲ್ಲಿ 100 ಹೊಸ ಪೊಲೀಸ್ ಠಾಣೆಗಳ ನಿರ್ಮಾಣ ಮಾಡಲಾಗುತ್ತದೆ ಎಂದರು. ತದನಂತರ, ಪೊಲೀಸ್ ಮಕ್ಕಳಿಗಾಗಿ ರಾಜ್ಯದ ಪ್ರಮುಖ 7 ಸ್ಥಳಗಳಲ್ಲಿ 7 ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು ಎಂದು ಘೋಷಿಸಿದರು.

ಕಳೆದ ವರ್ಷದ ವರದಿಯ ಪ್ರಕಾರ, ದೇಶದಲ್ಲಿ 216 ಮಂದಿ ಮತ್ತು ಕರ್ನಾಟಕದಲ್ಲಿ 12 ಮಂದಿ ಪೊಲೀಸ್ ಸಿಬ್ಬಂದಿ ಕರ್ತವ್ಯವನ್ನಾದಾಗಲೇ ಹುತಾತ್ಮರಾಗಿದ್ದಾರೆ. ಇವರು ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಜನರ ಪ್ರಾಣ, ಆಸ್ತಿ ರಕ್ಷಿಸುವ ಹೊತ್ತಲ್ಲಿ ಪ್ರಾಣ ತ್ಯಾಗ ಮಾಡಿರುವುದಾಗಿ ಸಿಎಂ ಅಭಿಪ್ರಾಯಪಟ್ಟರು.

ನಮ್ಮ ಪೊಲೀಸ್ ಪಡೆ ದೇಶದ ಆಂತರಿಕ ಭದ್ರತೆ ಕಾಪಾಡಲು ಮತ್ತು ಅಪರಾಧ, ದೌರ್ಜನ್ಯಗಳನ್ನು ತಡೆಯಲು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹೀಗಾಗಿ, ಅವರ ಜವಾಬ್ದಾರಿ ಬಹಳ ಮಹತ್ವದಾಗಿದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಅಸಮಾನತೆ ಇರುವ ಸಮಾಜದಲ್ಲಿ ಶೋಷಣೆ ಮತ್ತು ದೌರ್ಜನ್ಯಗಳು ಸಹಜವೆನಿಸುತ್ತದೆ. ಇವುಗಳನ್ನು ತಡೆದು ಶೋಷಿತ ಜನರ ಹಕ್ಕುಗಳನ್ನು ಕಾಪಾಡುವಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸುತ್ತಾರೆ. ಸರ್ಕಾರವು ಪೊಲೀಸ್ ಸಿಬ್ಬಂದಿಯ ಜೊತೆಗೆ ಸದಾ ಇರುತ್ತದೆ ಎಂದು ಹೇಳಿದರು.

ಅತ್ಯಾಧುನಿಕ ನಿರ್ವಹಣೆಗಾಗಿ, 6000 ಸಿಸಿಟಿವಿ ಕ್ಯಾಮರಾಗಳು ಮತ್ತು 260 ಹೆದ್ದಾರಿ ಗಸ್ತು ವಾಹನಗಳನ್ನು ಕಾರ್ಯನಿರ್ವಹಣೆಗೆ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯಕಾರ್ಯದರ್ಶಿ ಅತೀಕ್ ಎಲ್.ಕೆ., ಗೃಹ ಕಾರ್ಯದರ್ಶಿ ಉಮಾಶಂಕರ್, ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.ಇದನ್ನು ಓದಿ –ಮಂಡ್ಯ : ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ

ಕಾನೂನು ಸುವ್ಯವಸ್ಥೆ ಮತ್ತು ಜಿಡಿಪಿ

ಕಾನೂನು ಸುವ್ಯವಸ್ಥೆ ಮತ್ತು ದೇಶದ ಜಿಡಿಪಿ ನಡುವಿನ ನೇರ ಸಂಬಂಧವನ್ನು ಸಿಎಂ ಸಿದ್ದರಾಮಯ್ಯ ವಿವರಿಸಿದರು. ಕಾನೂನು ಸುವ್ಯವಸ್ಥೆ ಸರಿಯಾಗಿದ್ದರೆ ಬಂಡವಾಳ ಹೂಡಿಕೆ ಹೆಚ್ಚಾಗುತ್ತದೆ, ಹೂಡಿಕೆಯು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ, ಉದ್ಯೋಗದಿಂದ ಆರ್ಥಿಕತೆಯ ವೇಗ ಹೆಚ್ಚಾಗುತ್ತದೆ, ಮತ್ತು ಇದು ಜಿಡಿಪಿಯನ್ನು ಸಹ ಪ್ರಭಾವಿಸುತ್ತದೆ ಎಂದು ಅವರು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!