February 21, 2026

Newsnap Kannada

The World at your finger tips!

obama

ಬಾಲ್ಯದಲ್ಲಿ ರಾಮಾಯಣ, ಮಹಾ ಭಾರತದ ಕಥೆ ಕೇಳಿ ಬೆಳೆದ ಒಬಾಮಾ

Spread the love

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಇಂಡೋನೇಷ್ಯಾದಲ್ಲಿ ಬಾಲ್ಯ ಕಳೆಯುವಾಗ, ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಆಲಿಸುತ್ತಿದ್ದರಂತೆ. ಹೀಗಾಗಿ ಅವರಿಗೆ ಭಾರತದ ಬಗ್ಗೆ ವಿಶೇಷವಾದ ಪ್ರೀತಿ, ಗೌರವ..!

ತಮ್ಮ ಇತ್ತೀಚೆಗಿನ ‘ಎ ಪ್ರಾಮಿಸ್ಡ್‌ ಲ್ಯಾಂಡ್‌‘ ಕೃತಿಯಲ್ಲಿ ಭಾರತದ ಬಗೆಗಿರುವ ತಮ್ಮ ಪ್ರೀತಿಯನ್ನು ಹೀಗೆ ವ್ಯಕ್ತಪಡಿಸಿದ್ದಾರೆ.

‘ಜಗತ್ತಿನ ಆರನೇ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿರುವ, ಎರಡು ಸಾವಿರ ವಿಭಿನ್ನ ಜನಾಂಗಗಳು, ಏಳನೂರಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುವ ಆ ದೇಶ ತನ್ನ ವೈವಿಧ್ಯದಿಂದಲೇ ಎಲ್ಲರನ್ನೂ ಆಕರ್ಷಿಸುತ್ತದೆ‘ ಎಂದು ಅವರು ಕೃತಿಯಲ್ಲಿ ಬರೆದಿದ್ದಾರೆ.

‘ಅಮೆರಿಕದ ಅಧ್ಯಕ್ಷನಾಗುವ ಮುನ್ನ, ನಾನು ಭಾರತಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಆ ದೇಶ ನನ್ನ ಕಲ್ಪನೆಯಲ್ಲಿ ಯಾವಾಗಲೂ ವಿಶೇಷ ಸ್ಥಾನವನ್ನು ಪಡೆದಿತ್ತು‘ ಎಂದು ಒಬಾಮಾ ಹೇಳಿಕೊಂಡಿದ್ದಾರೆ.

‘ಬಾಲ್ಯದಲ್ಲಿ ರಾಮಾಯಣ, ಮಹಾಭಾರತದ ಕಥೆಗಳನ್ನು ಕೇಳಿದ್ದರಿಂದಲೋ ಅಥವಾ ನನಗೆ ಪೂರ್ವ ರಾಷ್ಟ್ರಗಳ ಧರ್ಮಗಳ ಬಗೆಗಿದ್ದ ಆಸಕ್ತಿಯೋ ಅಥವಾ ಭಾರತದ ಖಾದ್ಯಗಳಾದ ದಾಲ್ ಮತ್ತು ಕೀಮಾ ತಿನಿಸುಗಳನ್ನು ತಯಾರಿಕೆ ಕಲಿಸುವ ಜತೆಗೆ, ಬಾಲಿವುಡ್ ಸಿನಿಮಾ ನೋಡುವಂತೆ ಮಾಡಿದ್ದ ಪಾಕಿಸ್ತಾನ ಮತ್ತು ಭಾರತದ ಸ್ನೇಹಬಳಗದಿಂದಲೋ ಏನೊ, ಭಾರತದ ಬಗ್ಗೆ ನನ್ನಲ್ಲಿ ವಿಶೇಷ ಪ್ರೀತಿ ಮೂಡಿದೆ‘ ಎಂದು ಒಬಾಮಾ ಬರೆದುಕೊಂಡಿದ್ದಾರೆ.

ಒಬಾಮಾ ಅವರು ‘ಎ ಪ್ರಾಮಿಸ್ಡ್‌ ಲ್ಯಾಂಡ್‌‘ ಕೃತಿಯಲ್ಲಿ 2008ರ ಅಧ್ಯಕ್ಷೀಯ ಚುನಾವಣಾ ಪ್ರಚಾರದಿಂದ ಅಧ್ಯಕ್ಷರ ಅವಧಿ ಪೂರ್ಣಗೊಳ್ಳುವವರೆಗಿನ ಘಟನೆಗಳನ್ನು ಬರೆದಿದ್ದಾರೆ. ಜತೆಗೆ, ಪಾಕಿಸ್ತಾನದ ಅಬ್ಬೋಟ್ಟಾಬಾದ್‌ನಲ್ಲಿ ಅಲ್‌ಖೈದಾ ಮುಖಂಡ ಒಸಾಮಾಬಿನ್ ಲಾಡೆನ್‌ನ್ನು ಹತ್ಯೆ ಮಾಡಿದಂತಹ ಘಟನೆಗಳನ್ನೂ ಉಲ್ಲೇಖಿಸಿದ್ದಾರೆ. ಎರಡು ಸಂಪುಟಗಳಲ್ಲಿ ಸಿದ್ಧವಾಗುತ್ತಿ ರುವ ಈ ಕೃತಿಯ ಮೊದಲ ಭಾಗ, ವಿಶ್ವದಾದ್ಯಂತ ಪುಸ್ತಕ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಾಗುತ್ತಿದೆ.

error: Content is protected !!