ಕೊಡಗು ಸಮೀಪದ ತೊರೆನೂರು ಬಳಿಯ ಹಾರಂಗಿ ಎಡದಂಡೆ ನಾಲೆಯಲ್ಲಿ ಮೂವರು ಮಕ್ಕಳ ಶವ ಪತ್ತೆಯಾಗಿದೆ.
ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗುವಿನ ಮೃತದೇಹ ನಾಲೆಯ ನೀರಿನಲ್ಲಿ ತೇಲಿಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಮೇಲಕ್ಕೆ ಎತ್ತಿದ್ದಾರೆ.
ಹಾಸನದ ಅರಕಲಗೂಡು ತಾಲೂಕು ಅರಗಲ್ಲು ಗ್ರಾಮದ ಚೆನ್ನಮ್ಮ ಎಂಬಾಕೆಗೆ ಮೂವರು ಮಕ್ಕಳು. ಶುಂಠಿ ಕೀಳಲು ಆಕೆ ಮೂವರು ಮಕ್ಕಳೊಂದಿಗೆ ಹೊಲಕ್ಕೆ ಬಂದಿದ್ದಳು. ಬಟ್ಟೆ ಒಗೆಯಲು ಆಕೆ ಮೂವರು ಮಕ್ಕಳೊಂದಿಗೆ ಹಾರಂಗಿ ಎಡದಂಡೆ ನಾಲೆಗೆ ಹೋಗಿದ್ದಾಳೆ.
ಅ ಸಮಯದಲ್ಲಿ 5 ವರ್ಷದ ವಿಜಯ್, 3 ವರ್ಷದ ವಿನಯ್ ಮತ್ತು ಒಂದೂವೆರ ವರ್ಷದ ದೀಕ್ಷಾ ನಾಲೆಯಲ್ಲಿ ಮುಳುಗಿ ಸಾವ್ನಪ್ಪಿವೆ. ಆದರೆ ತಾಯಿ ಚೆನ್ನಮ್ಮ ಮಾತ್ರ ನಾಪತ್ತೆಯಾಗಿದ್ದಾಳೆ.
ಮೂವರು ಮಕ್ಕಳೊಂದಿಗೆ ತಾಯಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೇ? ಅಥವಾ ಮಕ್ಕಳೇ ಆಟವಾಡಲು ಹೋಗಿ ಕಾಲು ಜಾರಿ ನಾಲೆಗೆ ಬಿದ್ದರೆ ಎಂಬುದೂ ಖಚಿತವಾಗಿಲ್ಲ.
ಹಾರಂಗಿ ಜಲಾಶಯಕ್ಕೆ ನೀರು ಹರಿಸುವುದನ್ನು ಸ್ಥಗಿತ ಮಾಡಿ, ಶೋಧ ನಡೆಸಲಾಗುತ್ತಿದೆ. ಮಕ್ಕಳು ಎಲ್ಲಿಯವರು ಎಂಬುದು ಪತ್ತೆಯಾಗಿಲ್ಲ. ಮಕ್ಕಳ ದಿನಾಚರಣೆಯಂದೇ ಈ ದುರ್ಘಟನೆ ನಡೆದಿದೆ.
ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾಯಿ ಚೆನ್ನಮ್ಮನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.