ಚಾಮುಂಡಿಪುರಂನಲ್ಲಿರುವ ಶಾಸಕ ರಾಮದಾಸ್ ಕಚೇರಿ ಬಳಿ ಸಾವಿರಾರು ಮಂದಿ ರಾಮದಾಸ್ ಬೆಂಬಲಿಗರು ಜಮಾಯಿಸಿ ಘೋಷಣೆ ಕೂಗಿದರು. ಅಲ್ಲದೇ ಕೂಡಲೇ ರಾಮದಾಸ್ಗೆ ಟಿಕೆಟ್ ಘೋಷಿಸುವಂತೆ ಆಗ್ರಹಿಸಿದರು. ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರನ್ನು ಶಾಸಕ ಎಸ್.ಎ.ರಾಮದಾಸ್ ಅವರು ಸಮಾಧಾನ ಪಡಿಸಲು ಯತ್ನಿಸಿದರು.
ನಂತರ ಮಾತನಾಡಿದ ರಾಮದಾಸ್, ಬೆಂಬಲಿಗರ ಅಭಿಮಾನ ಕಂಡು ಭಾವುಕರಾಗಿ ಕಣ್ಣೀರು ಹಾಕಿದರು.
ಇನ್ನೂ ಕಾಲ ಮಿಂಚಿಲ್ಲ, ದಯವಿಟ್ಟು ಸಂಯಮದಿಂದ ಇರಿ ಎಂದು ಮನವಿ ಮಾಡಿದರು. ಆದರೂ ಇದಕ್ಕೆ ಒಪ್ಪದ ಬೆಂಬಲಿಗರು, ಟಿಕೆಟ್ ಘೋಷಣೆ ಆಗದಿದ್ದರೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಒತ್ತಾಯ ಮಾಡಿದರು.
ನಂತರ ಮತ್ತೆ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ವ್ಯಕ್ತಿಗಿಂತ ಪಕ್ಷ ಮುಖ್ಯ. ಹಾಗೆಯೇ ಪಕ್ಷಕ್ಕಿಂತ ಕಾರ್ಯಕರ್ತರು ಮುಖ್ಯ. ನೀವು ವಿಚಲಿತರಾಗಬಾರದು. ಬೇರೆ ಪಕ್ಷದ ದೊಡ್ಡ ನಾಯಕರು ನನ್ನ ಜೊತೆ ಮಾತನಾಡಿದಾಗಲೂ ಜೀವ ಬೇಕಾದರೆ ಬಿಡುತ್ತೇನೆ. ಪಕ್ಷ ಬಿಡುವುದಿಲ್ಲ ಎಂದಿದ್ದೇನೆ. ಪಕ್ಷ ನನಗೆ ಎರಡನೇ ತಾಯಿಯಾಗಿದೆ ಎಂದು ಹೇಳುವ ಮೂಲಕ ಭಾವುಕರಾದರು.
ಟಿಕೆಟ್ ನೀಡದಿದ್ದರೆ ಕಾರ್ಯಕರ್ತರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗುತ್ತೇನೆ. ನಾನು ಪಕ್ಷದ ನಾಯಕರನ್ನು ಭೇಟಿ ಮಾಡಿ ಇತ್ತೀಚಿನ ಎಲ್ಲಾ ಬೆಳವಣಿಗೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ಅಲ್ಲದೆ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದೇನೆ.
ಕೊನೆಯ ಚುನಾವಣೆಯಲ್ಲಿ ಗೆದ್ದು ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದೇನೆ. ಈ ಎಲ್ಲಾ ಬೆಳವಣಿಗೆಯ ನಡುವೆಯೂ ಟಿಕೆಟ್ ನೀಡದಿದ್ದರೆ ಪಕ್ಷದ ಕಾರ್ಯಕರ್ತರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದನಾಗುತ್ತೇನೆ ಎಂದು ತಿಳಿಸಿದರು.
ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನ
ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಬಿಜೆಪಿ ಅಭ್ಯರ್ಥಿಗಳ ಮೊದಲ ಹಾಗೂ ಎರಡನೇ ಪಟ್ಟಿಯಲ್ಲಿ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರ ಹೆಸರು ಇಲ್ಲದ್ದರಿಂದ ಅಸಮಾಧಾನಗೊಂಡ ಬೆಂಬಲಿಗರು ಬುಧವಾರ ರಾತ್ರಿಯೇ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು, ಯುವಕನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ.
ರಾಮದಾಸ್ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ರಾಮದಾಸ್ ಬೆಂಬಲಿಗರು ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ತೀವ್ರ ಬೇಸರಗೊಂಡ ಕನಕಗಿರಿಯ ನಿವಾಸಿ ಅನಿರುದ್ಧ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಮದಾಸ್ ಅವರ ಕಾರ್ಯವೈಖರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹೀಗಿದ್ದರೂ ಅವರ ಹೆಸರನ್ನು ಮೊದಲ ಹಾಗೂ ಎರಡನೇ ಪಟ್ಟಿಯಲ್ಲಿ ಘೋಷಿಸದೆ ಇರುವುದು ಬೇಸರ ತರಿಸಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.ಇದನ್ನು ಓದಿ – ಮಂಗಳೂರಿನ ಕಾಂಗ್ರೆಸ್ ಮುಖಂಡ, ಉದ್ಯಮಿ ವಿವೇಕ್ ಪೂಜಾರಿ ನಿವಾಸದ ಮೇಲೆ ದಾಳಿ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು