ದಸರಾ ಜಂಬೂಸವಾರಿ ಮೆರವಣಿಗೆ ಕೇವಲ 40 ನಿಮಿಷ ಮಾತ್ರ

Team Newsnap
1 Min Read

ಕೊರೋನಾ ಕಾರಣದಿಂದಾಗಿ ಈ ಬಾರಿ ಅರಮನೆಯ ಆವರಣದೊಳಗೆ ಆಯೋಜಿಸಲಾಗಿರುವ ದಸರಾದ ಮಹೋತ್ಸವದ ಜಂಬೂಸವಾರಿಯ ಮೆರವಣಿಗೆಯು ಕೇವಲ 30 ರಿಂದ40 ನಿಮಿಷಗಳ ಒಳಗೆ ಮುಗಿಯಲಿದೆ ಎಂದು ಮೈಸೂರು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ತಿಳಿಸಿದರು.

ಅಂಬಾ ವಿಲಾಸ ಅರಮನೆಯ ಆವರಣದಲ್ಲಿ ಜಂಬೂ ಸವಾರಿ ಮೆರವಣಿಗೆ ಸಿದ್ಧತೆಗಳನ್ನು ಪರಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ಕಾರಣದಿಂದಾಗಿ ಈ ಬಾರಿ ಈ ಅರಮನೆಯ ಆವರಣದೊಳಗೆ ಜಂಬೂ ಸವಾರಿ ನಡೆಯಲಿದೆ. ಇದರ ಅಂತಿಮ ತಾಲೀಮು ಇಂದು ಮುಗಿದಿದೆ ಎಂದರು.

ಸೋಮವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಅರಮನೆಯ ಬಲರಾಮ ಗೇಟ್ ನ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ, ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಮಧ್ಯಾಹ್ನ ಮೆರವಣಿಗೆ ನಡೆಯಲಿದೆ.

ಆಹ್ವಾನಿತರಿಗೆ ಮಾತ್ರ ಅರಮನೆ ಒಳಗಡೆ ಪ್ರವೇಶವಿದೆ. ಸಾರ್ವಜನಿಕರಿಗೆ ಅರಮನೆ ಪ್ರವೇಶವಿರುವುದಿಲ್ಲ ಎಂದು ತಿಳಿಸಿದರು. ಕೇವಲ 30 ರಿಂದ 40 ನಿಮಿಷಗಳ ಒಳಗೆ ಜಂಬೂಸವಾರಿ ಮೆರವಣಿಗೆ ಮುಗಿಯಲಿದೆ. ಆ ದಿನ ಅರಮನೆ ಸುತ್ತ ಇರುವ ಎಲ್ಲಾ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಇರುತ್ತದೆ.

ಜಂಬೂ ಸವಾರಿಯಲ್ಲಿ ಭಾಗವಹಿಸುವ ಕಲಾವಿದರು ವೀರಗಾಸೆ, ನಾದಸ್ವರ, ಸಾಂಸ್ಕೃತಿಕ ತಂಡ, ಅಶ್ವಪಡೆ, ಪೋಲೀಸ್ ಬ್ಯಾಂಡ್, ಒಂದು ಸ್ತಬ್ಧ ಚಿತ್ರದಲ್ಲಿ ಭಾಗವಹಿಸುವ ಜನರಿಗೆ ಮಾತ್ರ ಅರಮನೆ ಒಳಗೆ ಪ್ರವೇಶ ಇರುತ್ತದೆ. ಉಳಿದ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಕೇವಲ 300 ಜನರಿಗೆ ಮಾತ್ರ ಜಂಬೂ ಸವಾರಿಯಲ್ಲಿ ಭಾಗವಹಿಸಲು ಅವಕಾಶ ಇದೆ. ದೂರದರ್ಶನದಲ್ಲಿ ನೇರಪ್ರಸಾರ ಇರಲಿದೆ. ಆದ್ದರಿಂದ ಕೋವಿಡ್ ಸಂದರ್ಭದಲ್ಲಿ ಜನರು ಮನೆಯಿಂದಲೇ ಸರಳ ದಸರಾವನ್ನು ವೀಕ್ಷಣೆ ಮಾಡಬೇಕೆಂದು ಹೇಳಿದರು.

TAGGED:
Share This Article
Leave a comment