ಬಿಎಸ್​ವೈ ವೈಮಾನಿಕ ಸಮೀಕ್ಷೆ ಅರ್ಧಕ್ಕೆ ಮೊಟಕು – ಪ್ರತಿಪಕ್ಷಗಳಿಂದ ಕುಟುಕು

Team Newsnap
2 Min Read

ಮಳೆ, ಪ್ರವಾಹದಿಂದ ತತ್ತರಿಸಿದ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬುಧವಾರ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ
ಪೂರ್ಣಗೊಳಿಸದೇ ಪ್ರತಿಕೂಲ ಹವಾಮಾನದಿಂದಾಗಿ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾದರು.

ಸಮೀಕ್ಷೆಯನ್ನು ಅರ್ಧಕ್ಕೆ ಮೊಟಕು ಗೊಳಿಸಿದ ಸಿಎಂ ನಿರ್ಧಾರವನ್ನು
ಚಿತ್ತಾಪುರ ಶಾಸಕ ಪ್ರಿಯಾಂಕ್​ ಖರ್ಗೆ ಕುಟುಕಿದ್ದಾರೆ.

ಪ್ರವಾಹ ಪ್ರವಾಸ ನಡೆಸಿದ ಸಿಎಂ ಜನರ ಸಂಕಷ್ಟ ಆಲಿಸಲಿಲ್ಲ ಎಂದು ಕುಟುಕಿದರು. ಅಲ್ಲದೇ ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ಬದಲು ಸಂತ್ರಸ್ತರ ಸಮಸ್ಯೆ ಆಲಿಸಿದ್ದರೆ, ಪ್ರಯೋಜನವಾಗುತ್ತಿತ್ತು . ಸಿಎಂ ಹಾಗೆ ಮಾಡಲಿಲ್ಲ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಿಂದ ತೋರಣಗಲ್ ಗೆ ಆಗಮಿಸಿ, ಅಲ್ಲಿಂದ ಸೇನಾ ಹೆಲಿಕ್ಯಾಫ್ಟರ್ ಮೂಲಕ  ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ಆರಂಭಿಸಿದರು. ಕಲಬುರ್ಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ನೆರೆಪೀಡಿತ ಪ್ರದೇಶದ ವೀಕ್ಷಣೆ ಮಾಡಿದ ನಂತರ ಯಡಿಯೂರಪ್ಪ ಕಲಬುರ್ಗಿಗೆ ಆಗಮಿಸಿದರು.  ವಿಮಾನ ನಿಲ್ದಾಣದಲ್ಲಿಯೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.

ಈ ವೇಳೆ ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾನಿಯ ಮಾಹಿತಿ ನೀಡಿದರು. ಜಂಟಿ ಸರ್ವೆ ನಂತರ ಹಾನಿಯ ನಿಖರ ಮಾಹಿತಿ ಸಿಗಲಿದ್ದು, ಎನ್.ಡಿ.ಆರ್.ಎಫ್. ನಿಯಮದ ಅಡಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು. ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಯಾವುದೇ ಘೋಷಣೆ ಮಾಡುವ ಹಾಗಿಲ್ಲ ಎಂದರು.

ಪ್ರವಾಹದಿಂದ ಕಲಬುರ್ಗಿ ನಗರ ಮತ್ತು ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವುದರಿಂದ ಹಲವಾರು ಕಡೆ ವಿದ್ಯುತ್ ಸಮಸ್ಯೆಯಾಗಿದೆ. ಕುಡಿಯುವ ನೀರು, ವಿದ್ಯುತ್ ಮತ್ತಿತರ ಮೂಲಭೂತ ಸೌಕರ್ಯಗಳ ಸಮಸ್ಯೆ ನಿವಾರಿಸುವಂತೆ ಸೂಚಿಸಿದ್ದೇನೆ. ಮನೆ ಹಾಗೂ ಬೆಳೆ ಹಾನಿಗೆ ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಪರಿಹಾರ ನೀಡಲಾಗುವುದು. ನಾಲ್ಕು ಜಿಲ್ಲೆಗಳಲ್ಲಿ 14 ತಾಲೂಕುಗಳು ಸಂಕಷ್ಟಕ್ಕೆ ಗುರಿಯಾಗಿವೆ. 247 ಗ್ರಾಮಗಳಲ್ಲಿ ಸಮಸ್ಯೆಯಾಗಿದೆ. 233 ಕಾಳಜಿ ಕೇಂದ್ರ ತೆರೆಯಲಾಗಿದೆ. ಕಂದಾಯ ಹಾಗೂ ಕೃಷಿ ಇಲಾಖೆಯ ಜಂಟಿ ಸರ್ವೆ ನಂತರ ಹಾನಿಯ ನಿಖರ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.

ಸಿಎಂ ಈ ಸಮೀಕ್ಷೆ ಟೀಕಿಸಿರುವ ಪ್ರತಿಪಕ್ಷ ನಾಯಕರು,   ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದಾಗಲೇ ಅಲ್ಲಿನ ಜನರ ನೋವು ಏನೆಂಬುದು ಅರ್ಥವಾಗುವುದು. ಈಗ ಭೀಮಾ ಹಾಗೂ ಕಾಗಿಣಾ ನದಿ ನೀರು ಕಡಿಮೆಯಾಗಿದೆ. ಈಗ ಜನರ ಅಪೇಕ್ಷೆ ಇರೋದು ಪರಿಹಾರದ ಬಗ್ಗೆ ಹೊರತು ವೈಮಾನಿಕ ಸಮೀಕ್ಷೆ ಬಗ್ಗೆಯಲ್ಲ ಎಂದು ಕಿಡಿಕಾರಿದ್ದಾರೆ.

ಸಿಎಂ ಈ ಸಮೀಕ್ಷೆ ಟೀಕಿಸಿರುವ ಪ್ರತಿಪಕ್ಷ ನಾಯಕರು,   ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದಾಗಲೇ ಅಲ್ಲಿನ ಜನರ ನೋವು ಏನೆಂಬುದು ಅರ್ಥವಾಗುವುದು. ಈಗ ಭೀಮಾ ಹಾಗೂ ಕಾಗಿಣಾ ನದಿ ನೀರು ಕಡಿಮೆಯಾಗಿದೆ. ಈಗ ಜನರ ಅಪೇಕ್ಷೆ ಇರೋದು ಪರಿಹಾರದ ಬಗ್ಗೆ ಹೊರತು ವೈಮಾನಿಕ ಸಮೀಕ್ಷೆ ಬಗ್ಗೆಯಲ್ಲ ಎಂದು ಕಿಡಿಕಾರಿದ್ದಾರೆ.

Share This Article
Leave a comment