ಮಹಾಮಳೆಗೆ ತತ್ತರಿಸಿರುವ ಹೈದರಾಬಾದ್ ಹಾಗೂ ತೆಲಂಗಾಣದಲ್ಲಿ ಇದುವರೆಗೂ 18 ಸಾವುಗಳಾಗಿವೆ. ಹೈದರಾಬಾದ್ನ ಚಂದ್ರಯಾನಗುಟ್ಟ ಪ್ರದೇಶದಲ್ಲಿ ಮಳೆಗೆ ಒಂದು ಬಂಡೆ ಮನೆಯೊಂದರ ಮೇಲೆ ಉರುಳಿ ಕುಟುಂಬದ 14 ಜನ ಸಾವಿಗೀಡಾಗಿದ್ದಾರೆ.
ಆಂಧ್ರಪ್ರದೇಶದಲ್ಲೂ ಅಧಿಕ ಮಳೆ ಸುರಿಯುತ್ತಿದ್ದು ನಾಲ್ವರು ಮೃತಪಟ್ಟಿದ್ದಾರೆ. ಜನಜೀವನ ಅಸ್ತವ್ಯಸ್ತವಾಗಿದೆ.
1903ರಲ್ಲಿ ಹೈದರಾಬಾದ್ನಲ್ಲಿ ಸುರಿದ ಮಹಾಮಳೆಯ ನಂತರ, ಈಗ ಸುರಿಯುತ್ತಿರುವ ಮಳೆ ದೊಡ್ಡ ಪ್ರಮಾಣದ ಮಳೆಯಾಗಿದೆ. ಕಳೆದ ಒಂದು ದಿನದಲ್ಲಿ 191.8 ಮಿಲಿ ಮೀಟರ್ ಮಳೆಯಾಗಿದೆ ಎಂದು ವರದಿಯಾಗಿದೆ.
ಅಲ್ಲದೇ ಹೈದರಾಬಾದ್ನಿಂದ 20 ಕಿ.ಮಿ. ದೂರದಲ್ಲಿರುವ ಹಿಮಾಯತ್ ಸಾಗರದ ಜಲಾಶಯದ ಒಳ ಹರಿವು ಅಧಿಕವಾಗಿದ್ದು, 2 ಗೇಟ್ಗಳನ್ನು ತೆರೆದು 1,300. ಕ್ಯೂಸೆಕ್ಗಳಷ್ಟು ನೀರನ್ನು ಹೊರಬಿಟ್ಟಿದ್ದಾರೆ. ಅಧಿಕ ಮಳೆಯಿಂದ ಒಳ ಹರಿವು ಹೆಚ್ಚಾದರೆ ಇನ್ನೂ ಕೆಲವು ಗೇಟ್ ತೆರೆದು ನೀರನ್ನು ಬಿಡುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ ಹೈದರಾಬಾದ್ ಪ್ರವಾಹದಲ್ಲಿ ತೇಲಾಡಬೇಕಾಗುತ್ತದೆ.
ಮಳೆಯು ಬಿಟ್ಟೂ ಬಿಡದೇ ಸುರಿಯುತ್ತಿದ್ದು, ಮರಾಠವಾಡ, ಗೋವಾ, ಕೊಂಕಣ ನಾಡು, ಕರ್ನಾಟಕ ಉತ್ತರದ ಒಳಭಾಗ, ಮಧ್ಯಪ್ರದೇಶದಲ್ಲಿ ಇನ್ನೂ ಐದು ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.