ಸಂಪುಟವನ್ನು ಪುನರ್ ರಚಿಸುವಲ್ಲಿ ವಿಳಂಬ ಮಾಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಚಿವ ಸ್ಥಾನದ ಆಕಾಂಕ್ಷಿ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಕಿಡಿ ಕಾರಿದ್ದಾರೆ.
‘ನಾವು ಕಂಬಳಿ ಹಾಸಿದ್ದಕ್ಕೇ ಯಡಿಯೂರಪ್ಪ ಸಿಎಂ ಆಗಿದ್ದು. ನಾವು ಪಕ್ಷಾಂತರ ಮಾಡಿದ್ದರಿಂದಲೇ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು’ ಎಂದು ಆಕ್ರೋಶಭರಿತರಾಗಿ ಕುರುಬ ಸಮುದಾಯದ ಚಿಂತನಾ ಸಭೆಯಲ್ಲಿ ನುಡಿದರು.
ಇನ್ನಿಬ್ಬರು ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್ ಮತ್ತು ಆರ್. ಶಂಕರ್ ಕೂಡ ಸಂಪುಟ ವಿಸ್ತರಣೆ ಮಾಡದೇ ಇದ್ದುದಕ್ಕೆ ಹತಾಶರಾಗಿದ್ದಾರೆ ಎನ್ನಲಾಗಿದೆ.
ಈ ಮೊದಲು ಎಚ್ ವಿಶ್ವನಾಥ ಪದೇ ಪದೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿದ್ದರು. ಈಗ ಅವರು ಪೂರ್ಣವಾಗಿ ಸಿಎಂ ಅವರನ್ನು ಭೇಟಿಯಾಗುವದನ್ನು ಬಿಟ್ಟು ಬಿಟ್ಟಿದ್ದಾರೆ. ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆರ್. ಶಂಕರ್ ಅವರೂ ಸಹ ತಾವು ಬೇರೆ ಪಕ್ಷದಿಂದ ಬಂದು ಬಿಜೆಪಿಯನ್ನು ಅಧಿಕಾರಕ್ಕೆ ತಂದರೂ ಸಹ, ತಮ್ಮನ್ನು ಸಚಿವಗಿರಿಗೆ ಉಪೇಕ್ಷೆ ಮಾಡಿರುವದರಿಂದ ಸಂಪೂರ್ಣ ಮೌನಕ್ಕೆ ಜಾರಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ.