ದೋಸ್ತಿಗಳೇ ವಾಮಾಚಾರ ನಡೆಸಿ ಸ್ನೇಹಿತನನ್ನೇ ಬಲಿ ಕೊಟ್ಟು ಬಂಧಿಯಾದರು

Team Newsnap
1 Min Read

ನಂಜನಗೂಡು ತಾಲೂಕು ಹಳೇಪುರ ಕೆರೆ ಏರಿ ಮೇಲೆ ವಾಮಾಚಾರಕ್ಕೆ ಬಾಲಕನೊಬ್ಬ ಬಲಿಯಾಗಿದ್ದಾನೆ.

ಧನುರ್ ಮಾಸದ ಅಮಾವಾಸ್ಯ ದಿನದಂದು ಕೆರೆ ಬಳಿ ವಾಮಾಚಾರ ಮಾಡಿದ ಸ್ನೇಹಿತರೇ ಅಮಾಯಕ ಬಾಲಕನನ್ನ ಬಲಿ ಪಡೆದಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದ ಸಂಬಂಧ ಮೂವರನ್ನು ಬಂಧನ ಮಾಡಲಾಗಿದೆ.ನಂಜನಗೂಡು ತಾಲೂಕು ಹಳೆಪುರ ಗ್ರಾಮದ ಕೆರೆಯಲ್ಲಿ ಬಾಲಕನ ಮೃತದೇಹ ದೊರೆತಿದೆ.

ಎಸ್.ಎಸ್.ಎಲ್.ಸಿ ಓದುತ್ತಿದ್ದ ಮಹೇಶ್ ಅಲಿಯಾಸ್ ಮನು (16) ಸ್ನೇಹಿತರ ಸಂಚಿಗೆ ಬಲಿಯಾದ ಅಮಾಯಕ ಬಾಲಕ.

ನಿನ್ನೆ ಧನುರ್ ಮಾಸದ ಅಮಾವಾಸ್ಯೆಯ ದಿನದ ಮಧ್ಯಾಹ್ನ ಕೃತ್ಯ ನಡೆದಿದೆ. ವಾಮಾಚಾರ ಹೆಸರಲ್ಲಿ ಹತ್ಯೆ ಮಾಡಿದ ಆರೋಪದ ಅಡಿ ಆತನ ಮೂವರು ಸ್ನೇಹಿತರನ್ನು ಕೌಲಂದೆ ಪೊಲೀಸರು ಬಂಧಿಸಿದ್ದಾರೆ.

ಮೃತ ಮಹೇಶ್ ಹಾಗೂ ಅಪ್ರಾಪ್ತ ಆರೋಪಿಗಳು ಸ್ನೇಹಿತರು .ಈ ಪೈಕಿ ಒಬ್ಬ ಆರೋಪಿ ಚಿಕ್ಕ ವಯಸ್ಸಿನಲ್ಲೇ ತಾತನಿಂದ ವಾಮಾಚಾರ ಮಾಡುವುದನ್ನು ಕಲಿತಿದ್ದನಂತೆ. ಧನುರ್ ಮಾಸದ ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ. ಇದೇ ದೃಷ್ಟಿಯಿಂದ ನಿನ್ನೆ ಮಹೇಶ್ ನನ್ನು ಪುಸಲಾಯಿಸಿದ ಮೂವರು ಆರೋಪಿಗಳು ಕೆರೆ ಬಳಿಗೆ ಕರೆತಂದಿದ್ದಾರೆ.

ಕೃತ್ಯವೆಸಗಿದ ನಂತರ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮಹೇಶ್ ಕೆರೆಗೆ ಬಿದ್ದಿದ್ದಾನೆ ಎಂದು ಸ್ನೇಹಿತನೊಬ್ಬ ಗ್ರಾಮದ ಹಿರಿಯರಿಗೆ ಮಾಹಿತಿ ತಿಳಿಸಿದ್ದಾನೆ. ಗ್ರಾಮದ ಜನ ಕೆರೆಯಲ್ಲಿ ಶೋಧನೆ ಮಾಡಿದಾಗ ಮಹೇಶ್ ಮೃತದೇಹ ದೊರೆತಿದೆ. ಅಲ್ಲದೆ ಕೆರೆ ಬಳಿ ವಾಮಾಚಾರ ಪೂಜೆ ಮಾಡಿದ ಕುರುಹುಗಳು ಪತ್ತೆಯಾಗಿದೆ.

ಸ್ಥಳದಲ್ಲಿ ಗೊಂಬೆಯೊಂದನ್ನು ತಯಾರಿಸಿ ಅದರ ಮೇಲೆ ಮಹೇಶ್ ಹೆಸರು ಬರೆದು ನಂತರ ಭೀಕರವಾಗಿ ಪೂಜೆ ಮಾಡಿದ್ದಾರೆ. ಸ್ನೇಹಿತರ ಉದ್ದೇಶ ಅರಿಯದ ಅಮಾಯಕ ಮಹೇಶ್ ಜೊತೆಗೆ ಬಂದಿದ್ದಾನೆ. ಪೂಜೆ ನಂತರ ಮಹೇಶ್ ನನ್ನು ಆರೋಪಿಗಳು ಕೆರೆಗೆ ತಳ್ಳಿದ್ದಾರೆ ಎನ್ನಲಾಗಿದೆ.
ಗೊಂಬೆ, ಕೋಳಿ, ಮಡಿಕೆ ಸೇರಿದಂತೆ ಇನ್ನಿತರ ಪದಾರ್ಥಗಳು ದೊರೆತ್ತಿದ್ದು, ಕೌಲಂದೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೂವರು ಆರೋಪಿಗಳು ಅಪ್ರಾಪ್ತರೆಂದು ಹೇಳಲಾಗಿದ್ದು, ದೊಡ್ಡಕವಲಂದೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a comment