ಮಂಡ್ಯದ ಹಲ್ಲೇಗೆರೆ ಶಂಕರ್ ಕುಟುಂಬದ ಐವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ ಮಧು ಸಾಗರ್ ಬರೆದಿರುವ ಡೈರಿ ಬ್ಯಾಡರಹಳ್ಳಿ ಪೊಲೀಸರಿಗೆ ಸಿಕ್ಕಿದೆ.
ಮೃತರ ಮನೆಯಲ್ಲಿ ಲಭಿಸಿದ ಡೈರಿಯಲ್ಲಿ ಆತ್ಮಹತ್ಯೆಗೂ ಮುನ್ನ ನಡೆದ ಘಟನೆಗಳ ಸ್ಫೋಟಕ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.
ಆತ್ಮಹತ್ಯೆಗೆ ಶರಣಾಗುವುದಕ್ಕೂ ಮುನ್ನ ಕುಟುಂಬಸ್ಥರು ತಮ್ಮ ಡೈರಿಯಲ್ಲಿ, ಮನೆಯಲ್ಲಿ ಉಂಟಾದ ಜಗಳ ಹಾಗೂ ಮನಸ್ತಾಪಗಳ ಕುರಿತು ಮಾಹಿತಿ ಬರೆದಿಟ್ಟಿದ್ದಾರೆ. ಈ ಹಿಂದೆ ತಂದೆಯ ವಿರುದ್ಧವೇ ಮಧು ಸಾಗರ್ ದೂರು ನೀಡಲು ಮುಂದಾಗಿ ರಾಜಿ ಸಂಧಾನಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಸದ್ಯ ಮಧು ಸಾಗರ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಹಳೆ ಡೈರಿಗೆ ಮರುಜೀವ ಬಂದಿದೆ. ಕುಟುಂಬಸ್ಥರ ಸಾವಿನ ಕುರಿತು ಡೈರಿಲ್ಲಿ ಬರೆದಿರುವ ಸಾಧ್ಯತೆ ಇದೆ.
ಅಮ್ಮ ಮತ್ತು ಅಕ್ಕಂದಿರ ಆತ್ಮಹತ್ಯೆ ಬಳಿಕ ಡೈರಿಯಲ್ಲಿ ಜೀವನದ ಕೊನೆ ಸಾಲುಗಳನ್ನು ಮಧು ಸಾಗರ್ ಬರೆದಿಟ್ಟಿರುವ ಸಾಧ್ಯತೆ ಇದೆ ಅಂತ ಶಂಕೆ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಅಮ್ಮ-ಅಕ್ಕಂದಿರು ಆತ್ಮಹತ್ಯೆಗೆ ಶರಣಾದ ಎರಡು ದಿನ ಬಳಿಕ ಮಧುಸಾಗರ್ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ಪೊಲೀಸರಿಗೆ ಮೂಡಿದೆ.
ಸದ್ಯ ಬ್ಯಾಡರಹಳ್ಳಿ ಪೊಲೀಸರು ಡೈರಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಡೈರಿಯಲ್ಲಿ ಮಧು ಸಾಗರ್ ಬರೆದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.