ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ವಾಗ್ವಾದ ಕೊಂಚ ತಣ್ಣಗಾಗಿದೆ. ಆದರೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಂತಹ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿವಾಸದ ಮೇಲೆ ಕಿಡಿಗೇಡಿಗಳು ಕಳೆದ ರಾತ್ರಿ ಬಿಯರ್ ಬಾಟಲ್ ಎಸೆದು ದಾಳಿ ನಡೆಸಿದ್ದಾರೆ.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಂಸದೆ ಸುಮಲತಾಗೆ ಬೆಂಬಲಿಸಿ ಮಾತನಾಡಿದ್ದರು. ಈ ಬಳಿಕ ರಾಕ್ ಲೈನ್ ವೆಂಕಟೇಶ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು, ಮುಖಂಡರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದರು.
ಈ ಕಾರಣದಿಂದಾಗಿ ಸಂಸದೆ ಸುಮಲತಾ ಸೇರಿದಂತೆ ಹಲವರ ನಿವಾಸಗಳಿಗೂ ಸರ್ಕಾರ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿತ್ತು.
ತನ್ಮಧ್ಯೆ ಕಳೆದ ಮಧ್ಯರಾತ್ರಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿವಾಸದ ಮೇಲೆ ಕಿಡಿಗೇಡಿಗಳು ಬಿಯರ್ ಬಾಟಲ್ ಎಸೆದು ದಾಳಿ ನಡೆಸಿರೋದಾಗಿ ತಿಳಿದು ಬಂದಿದೆ.
ರಾಕ್ ಲೈನ್ ನಿವಾಸದಲ್ಲಿರುವಂತ ಸಿಸಿಟಿವಿಯಲ್ಲಿ, ಅಪರಿಚಿತ ಕಿಡಿಗೇಡಿಗಳು ಬಿಯರ್ ಬಾಟಲ್ ಎಸೆದಿರೋದು ದೃಶ್ಯಗಳು ಸೆರೆಯಾಗಿವೆ. ಈ ಮೂಲಕ ಸಂಸದೆ ಸುಮಲತಾ ವರ್ಸಸ್ ಕುಮಾರಸ್ವಾಮಿ ಟಾಕ್ ವಾರ್ ಮತ್ತಷ್ಟು ತಾರಕಕ್ಕೇರಿದಂತೆ ಕಂಡುಬಂದಿದೆ.