ಕೇಂದ್ರ ಕ್ಯಾಬಿನೆಟ್ ಗುರುವಾರ ಬೆಳಗ್ಗೆ 10:30ಕ್ಕೆ ಪುನರ್ ರಚನೆಯಾಗಲಿದೆ. ಕೆಲ ಸಚಿವರನ್ನು ಕೈಬಿಡುವ ಸಾಧ್ಯತೆಯಿದೆ. ಕರ್ನಾಟಕದಿಂದ ಇಬ್ಬರು, ಮೂವರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಯಿದೆ.
ಈಗಾಗಲೇ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿಯವರು ನಿಧನದಿಂದ ಒಂದು ಸ್ಥಾನ ಖಾಲಿಯಾಗಿದೆ.
ಈ ಸ್ಥಾನಕ್ಕೆ ಇಬ್ಬರು ಲಿಂಗಾಯತ ಸಂಸದರ ಹೆಸರು ಸ್ಪರ್ಧೆಯಲ್ಲಿದೆ. ರಾಜ್ಯ ರಾಜಕಾರಣದ ದೃಷ್ಟಿಯಿಂದಲೂ ಮಂತ್ರಿ ಸ್ಥಾನ ಮಹತ್ವ ಪಡೆದಿದೆ.
ರಾಜ್ಯದಿಂದ ಉಮೇಶ್ ಜಾಧವ್(ಕಲಬುರಗಿ), ಶಿವಕುಮಾರ್ ಉದಾಸಿ(ಹಾವೇರಿ), ಬಿ.ವೈ. ರಾಘವೇಂದ್ರ(ಶಿವಮೊಗ್ಗ), ಪ್ರತಾಪ್ ಸಿಂಹ (ಮೈಸೂರು-ಕೊಡಗು), ಶೋಭಾ ಕರಂದ್ಲಾಜೆ (ಉಡುಪಿ-ಚಿಕ್ಕಮಗಳೂರು), ಭಗವಂತ್ ಖೂಬಾ(ಬೀದರ್) ಪಿ.ಸಿ. ಗದ್ದಿಗೌಡರ್(ಬಾಗಲಕೋಟೆ), ಎ. ನಾರಾಯಣಸ್ವಾಮಿ (ಚಿತ್ರದುರ್ಗ) ಹೆಸರುಗಳು ಕೇಂದ್ರ ಮಂತ್ರಿ ಸ್ಥಾನಕ್ಕೆ ಕೇಳಿ ಬಂದಿವೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡ ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಬಿಜೆಪಿ ಜನರಲ್ ಸೆಕ್ರೆಟರಿ ಭೂಪೇಂದ್ರ ಯಾದವ್ ಹಾಗೂ ಕೈಲಾಶ್ ವಿಜಯವರ್ಗಿಯಾ, ಬಿಜೆಪಿ ವಕ್ತಾರ ಹಾಗೂ ಅಲ್ಪ ಸಂಖ್ಯಾತ ಮುಖಂಡ ಝಪರ್ ಇಸ್ಲಾಂ ಮೋದಿ ಸಂಪುಟ ಸೇರಿಕೊಳ್ಳುವ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ, ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನವಾಲ ಅವರಿಗೂ ಮಂತ್ರಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಿದೆ.
ಅಲ್ಲದೇ ಉತ್ತರ ಪ್ರದೇಶ, ರಾಜಸ್ಥಾನದ ಪ್ರಮುಖ ನಾಯಕರಿಗೂ ಮಂತ್ರಿ ಯೋಗವಿದೆ.