February 25, 2026

Newsnap Kannada

The World at your finger tips!

ap

ಅಗಲಿದ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಶ್ರದ್ಧಾಂಜಲಿ

Spread the love

ಬೆಂಗಳೂರು:
ಹಾವೇರಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ, ಹಿರೆಕೆರೂರು ತಾಲ್ಲೂಕು ವಿಜಯ ಕರ್ನಾಟಕ ವರದಿಗಾರ
ರಾಮು ಮುದಿಗೌಡರ್, ಚಿಕ್ಕಬಳ್ಳಾಪುರ ಜಿಲ್ಲೆ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ, ಅಂಕಣಕಾರ, ಹಿರಿಯ ಪತ್ರಕರ್ತ ಹಾಲ್ದೊಡ್ಡೇರಿ ಸುಧೀಂದ್ರ, ಮೈಸೂರಿನಲ್ಲಿ ಸುಧರ್ಮ ಸಂಸ್ಕೃತ ಪತ್ರಿಕೆಯನ್ನು 50 ವರ್ಷದಿಂದ ಮುನ್ನೆಡೆಸಿಕೊಂಡು ಬಂದು ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದ ಹಿರಿಯ ಪತ್ರಕರ್ತ ಸಂಪತ್ ಕುಮಾರ್ ಅವರು ಸೇರಿದಂತೆ ಅಗಲಿದ ಹಲವು ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ (ಕಂದಾಯ ಭವನ 3ನೇ ಮಹಡಿ) ಸಭಾಂಗಣದಲ್ಲಿ ಒಂದು ನಿಮಿಷ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಹಾಲ್ದೊಡ್ಡೇರಿ ಸುಧೀಂದ್ರ ಅವರು ವಿಜ್ಞಾನದ ಸಂಗತಿ, ಬಾಹ್ಯಾಕಾಶ ವಿಷಯಗಳನ್ನು ತಮ್ಮ ಕನ್ನಡ ಬರಹದಲ್ಲಿ ಕಟ್ಟಿಕೊಟ್ಟ ಅಪರೂಪದ ಪ್ರತಿಭಾನ್ವಿತರೊಬ್ಬರನ್ನ ಸುದ್ದಿಮನೆ ಕಳೆದುಕೊಂಡಿದೆ ಎಂದರು.
ಸುಧನ್ವ ಸಂಸ್ಕೃತ ಪತ್ರಿಕೆಯನ್ನು ದೇಶದ ಉದ್ದಗಲಕ್ಕೂ ಕಳುಹಿಸುತ್ತಿದ್ದ ಮೈಸೂರಿನ ಸಂಪತ್ ಕುಮಾರ್ ಕೂಡ ಪ್ರತಿಭಾನ್ವಿತ ಪತ್ರಕರ್ತ ಎಂದು ಶ್ಲಾಘಿಸಿದರು.

ಸಂಘಜೀವಿಗಳು:
ಹಿರಿಯ ಪತ್ರಕರ್ತರು ಮತ್ತು ಸಂಘದ ಪದಾಧಿಕಾರಿಗಳಾದ ಹಾವೇರಿಯ
ರಾಮುಮುದಿಗೌಡರ್ ಮತ್ತು ಚಿಕ್ಕಬಳ್ಳಾಪುರದ‌ ಮುನಿಕೃಷ್ಣಪ್ಪ ಅವರು ಸರಳ ಸಜ್ಜನಿಕೆಯ ಸಂಘ ಜೀವಿಗಳಾಗಿದ್ದರು. ಸಂಘಕ್ಕೆ ಬದ್ದವಾಗಿ ನಡೆದುಕೊಂಡು ಸಂಘಟನೆ ಬೆಳೆಸಲು ಮುಂದಾಗಿದ್ದ ಇಬ್ಬರು ಮುಂದಾಳುಗಳನ್ನ ಕಳೆದುಕೊಂಡದ್ದು ಸಂಘಕ್ಕೆ ಆದ‌ ದೊಡ್ಡ ನಷ್ಟ ಎಂದರು.

IFWJ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಸಾವು ಯಾವಾಗ ಬರುತ್ತದೆ ಎನ್ನುವುದು ಯಾರಿಗೂ ತಿಳಿಯದು. ಇದ್ದ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಲು ಮುಂದಾಗಿ ಎಂದು ಕಿವಿಮಾತು ಹೇಳಿದರು.

ಸಂಘದ ಪದಾಧಿಕಾರಿಗಳಾದ ಜೆ.ಸಿ.ಲೋಕೇಶ್, ಬಂಗಲೆ ಮಲ್ಲಿಕಾರ್ಜುನ, ನಗರ ಘಟಕದ
ದೇವರಾಜು ಮಾತನಾಡಿದರು.

error: Content is protected !!