ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಹುಬ್ಬಳ್ಳಿಯ ಮನೆಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಶ್ರೀದೇವಿ ಕಮ್ಮಾರ ಎಂಬಾಕೆಯೇ ಮೃತ ಮಹಿಳೆ. ತಾನು ವಾಸಿಸುತ್ತಿದ್ದ ಮನೆ ಬಿದ್ದ ಪರಿಣಾಮ ಪರಿಹಾರಕ್ಕೆ ಅಲೆದಾಡಿದ ಮಹಿಳೆ ಮನನೊಂದು ಏಪ್ರಿಲ್ 6ರಂದು ಸಚಿವರ ಹುಬ್ಬಳ್ಳಿ ಮಯೂರಿ ಎಸ್ಟೇಟ್ ನಲ್ಲಿರುವ ಮನೆಯ ಎದುರು ಆತ್ಮಹತ್ಯೆಗೆ ಯತ್ನಿಸಿದ್ದರು. ಇದೇ ವೇಳೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ.
ಮನೆ ನಿರ್ಮಾಣದ ಬಗ್ಗೆ ಸ್ಥಳೀಯ ಶಾಸಕರು, ಅಧಿಕಾರಿಗಳ ಬಳಿ ಅಲೆದಾಡಿ ಬೇಸತ್ತಿದ್ದ ಮಹಿಳೆ ವಿಷ ಸೇವಿಸಿದ್ದರು. ಅಲ್ಲದೇ ತನ್ನ ಸಾವಿನ ಬಗ್ಗೆ ಕೂಡ ಡೆತ್ ನೋಟ್ ಬರೆದಿಟ್ಟು ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯ ನಂತರ ಮಹಿಳೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೇಶವಪುರ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.