ಪಾನಮತ್ತನಾದ ವ್ಯಕ್ತಿ ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ ಮನೆಯಲ್ಲಿದ್ದ 6 ಮಂದಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.
ಈ ದುರ್ಘಟನೆಯಲ್ಲಿ ಬೇಬಿ(45), ಸೀತೆ(40), ಪ್ರಾರ್ಥನ (6), ವಿಶ್ವಾಸ್(3), ಪ್ರಕಾಶ್(7) ಹಾಗೂ ಪಾಚೆ(60) ಮೃತ ದುರ್ದೈವಿಗಳು.
ಎರವರ ಬೋಜ ಎಂಬಾತ ಈ ಹೀನ ಕೃತ್ಯ ಎಸಗಿದ್ದಾನೆ. ಪಾನಮತ್ತನಾಗಿದ್ದ ಬೋಜ ಎರವರ ಮಂಜ ಎಂಬುವವರ ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
3 ಮಂದಿ ಸಜೀವ ದಹನ :
ಆತ ಮನೆಬಾಗಿಲಿಗೆ ಹೊರಗಿನಿಂದ ಬೀಗ ಹಾಕಿದ್ದ ಎಂದು ತಿಳಿದುಬಂದಿದೆ. ಬೆಂಕಿಯ ಪರಿಣಾಮ ಮನೆಯಲ್ಲಿ ಮಲಗಿದ್ದ 8 ಮಂದಿ ಪೈಕಿ ಮೂವರು ಸಜೀವ ದಹನವಾಗಿದ್ದಾರೆ.
3 ಮಂದಿ ಆಸ್ಪತ್ರೆಯಲ್ಲಿ ಸಾವು :
ಇನ್ನುಳಿದ ಐವರು ಗಂಭೀರವಾಗಿ ಗಾಯಗೊಂಡ ಅವರನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪೈಕಿ ವಿಶ್ವಾಸ್, ಪ್ರಕಾಶ್ ಹಾಗೂ ಪಾಚೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಭಾಗ್ಯ ಎಂಬುವವರ ಸ್ಥಿತಿ ಗಂಭೀರವಾಗಿದೆ.
ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.