ಮನೆಗೆ ಬೆಂಕಿ ಹಚ್ಚಿದ ಪಾನಮತ್ತ ವ್ಯಕ್ತಿ : ಕೊಡಗಿನಲ್ಲಿ 6 ಮಂದಿ ದುರಂತ ಸಾವು

Team Newsnap
1 Min Read

ಪಾನಮತ್ತನಾದ ವ್ಯಕ್ತಿ ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ ಮನೆಯಲ್ಲಿದ್ದ 6 ಮಂದಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

ಈ ದುರ್ಘಟನೆಯಲ್ಲಿ ಬೇಬಿ(45), ಸೀತೆ(40), ಪ್ರಾರ್ಥನ (6), ವಿಶ್ವಾಸ್(3), ಪ್ರಕಾಶ್​(7) ಹಾಗೂ ಪಾಚೆ(60) ಮೃತ ದುರ್ದೈವಿಗಳು.

ಎರವರ ಬೋಜ ಎಂಬಾತ ಈ ಹೀನ ಕೃತ್ಯ ಎಸಗಿದ್ದಾನೆ. ಪಾನಮತ್ತನಾಗಿದ್ದ ಬೋಜ ಎರವರ ಮಂಜ ಎಂಬುವವರ ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.

3 ಮಂದಿ ಸಜೀವ ದಹನ‌ :

ಆತ ಮನೆಬಾಗಿಲಿಗೆ ಹೊರಗಿನಿಂದ ಬೀಗ ಹಾಕಿದ್ದ ಎಂದು ತಿಳಿದುಬಂದಿದೆ. ಬೆಂಕಿಯ ಪರಿಣಾಮ ಮನೆಯಲ್ಲಿ ಮಲಗಿದ್ದ 8 ಮಂದಿ ಪೈಕಿ ಮೂವರು ಸಜೀವ ದಹನವಾಗಿದ್ದಾರೆ.

3 ಮಂದಿ ಆಸ್ಪತ್ರೆಯಲ್ಲಿ ಸಾವು :

ಇನ್ನುಳಿದ ಐವರು ಗಂಭೀರವಾಗಿ ಗಾಯಗೊಂಡ ಅವರನ್ನು ಮೈಸೂರಿನ ಕೆ.ಆರ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪೈಕಿ ವಿಶ್ವಾಸ್, ಪ್ರಕಾಶ್​ ಹಾಗೂ ಪಾಚೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಭಾಗ್ಯ ಎಂಬುವವರ ಸ್ಥಿತಿ ಗಂಭೀರವಾಗಿದೆ.

ಪೊನ್ನಂಪೇಟೆ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment