ಜಮೀನು ವಿವಾದ: ದುದ್ದ ಪೊಲೀಸ್ ಠಾಣೆಗೆ ಆಗಮಿಸಿದ ನಟ ಯಶ್

Team Newsnap
1 Min Read

ಜಮೀನಿನಲ್ಲಿ ಕೆಲಸ ಮಾಡದಂತೆ ಸ್ಥಳೀಯರು ಹಾಗೂ ನಟ ಯಶ್ ಪೋಷಕರ ನಡುವೆ ನಡೆಯುತ್ತಿರುವ ಗಲಾಟೆ ಸಂಬಂಧ ನಟ ಯಶ್​​ ದುದ್ದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.

ಹಾಸನದಲ್ಲಿನ ಜಮೀನಿನ ಬಳಿ ಜೆಸಿಬಿ ಮೂಲಕ ಕೆಲಸ ಮಾಡಿಸುತ್ತಿದ್ದ ವೇಳೆ ಗ್ರಾಮಸ್ಥರು ಹಾಗೂ ಯಶ್ ಪೋಷಕರ ನಡುವೆ ಮಾತಿನ ಚಕಮಕಿ ನಡೆದಿತ್ತು.

ಈ ಹಿನ್ನೆಲೆ ಮಾಹಿತಿ ಪಡೆಯುವ ಸಲುವಾಗಿ ದುದ್ದ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.

ಇಂದು ಬೆಳಗ್ಗೆಯಿಂದಲೇ ಗ್ರಾಮಸ್ಥರು ಹಾಗೂ ಯಶ್ ಪೋಷಕರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಸ್ಥಳಕ್ಕೆ ಯಶ್ ಅಭಿಮಾನಿಗಳು ಸಹ ದೌಡಾಯಿಸಿದ್ದರು. ಸದ್ಯ ಗ್ರಾಮಸ್ಥರು ಹಾಗೂ ಯಶ್​ ಪೋಷಕರ ನಡುವೆ ಪೊಲೀಸರು ಸಂಧಾನ ಕಾರ್ಯ ಮಾಡಿಸುತ್ತಿದ್ದಾರೆ.

ವಾಗ್ವಾದಕ್ಕೆ ಜಮೀನು ವಿವಾದ ಕಾರಣ..?

ಯಶ್ ತಾಯಿ ಮೂಲತಃ ಹಾಸನ ಜಿಲ್ಲೆಯವರು. ಹಾಸನ ನಗರದಲ್ಲಿ ಒಂದು ಮನೆ ಖರೀದಿಸಿದ್ದಾರೆ. ಹಾಸನ ತಾಲೂಕಿನ ತಿಮ್ಲಾಪುರ ಗ್ರಾಮದ ಸಮೀಪ ಸುಮಾರು 80 ಎಕರೆ ಜಮೀನನ್ನು ಖರೀದಿಸಿದ್ದಾರೆ.. ಈ ಜಮೀನು ವಿಚಾರದಲ್ಲಿಯೇ ಯಶ್ ಕುಟುಂಬ ಹಾಗೂ ಗ್ರಾಮಸ್ಥರ ನಡುವೆ ಗಲಾಟೆ ಆರಂಭವಾಗಿದೆ. ನಾವು ಈಗಾಗಲೇ ಯಶ್ ಅವರ ಜಮೀನಿಗೆ ಓಡಾಡಲು ಜಾಗ ಕೊಟ್ಟಿದ್ದೇವೆ. ಆದರೆ ಅವರು ಸರ್ಕಾರಿ ನಕ್ಷೆ ಪ್ರಕಾರ ನಮ್ಮ ಜಮೀನಿಗೆ ಓಡಾಡಲು ಮತ್ತೊಂದು ರಸ್ತೆಯಿದೆ ಎಂದು ಹೇಳುತ್ತಾ ನಮ್ಮ ಜಮೀನಿನ ಮೇಲೆ ರಸ್ತೆ ಮಾಡಲು ಬಂದಿದ್ದಾರೆ ಎಂದು ತಿಮ್ಲಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ.

ತಾತ-ಮುತ್ತಾತಂದಿರ ಕಾಲದಿಂದ ನಾವು ಉಳುಮೆ ಮಾಡುತ್ತಿರುವ ಜಮೀನಿನ ಮೇಲೆ ಮತ್ತೆ ದಾರಿ ಕೊಡಲ್ಲ ಅಂತಿದ್ದಾರೆ.ಇದೇ ವಿಚಾರವಾಗಿ ಈಗ ತಿಮ್ಲಾಪುರ ಗ್ರಾಮಸ್ಥರು ಮತ್ತು ಯಶ್ ಬೆಂಬಲಿಗರ ನಡುವೆ ಕಿತ್ತಾಟವಾಗುತ್ತಿದೆ ಎಂದು ತಿಳಿದುಬಂದಿದೆ.

ಸದ್ಯ ಪ್ರಕರಣ ದುದ್ದ ಪೊಲೀಸ್ ಠಾಣೆ ಮೆಟ್ಟುಲೇರಿದೆ. ಪೊಲೀಸರು ಯಶ್ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ಸಂಧಾನ ಮಾಡಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

Share This Article
Leave a comment