ನಟ ದರ್ಶನ್ ಅಭಿಮಾನಿಗಳ ತರಾಟೆಯಿಂದ ಬೇಸರಗೊಂಡಿರುವ ಹಿರಿಯ ನಟ ಜಗ್ಗೇಶ್ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇನ್ಮುಂದೆ ನಾನು ಉದ್ಯಮದ ಯಾರದೇ ಹುಟ್ಟುಹಬ್ಬ, ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ. ಅವರಿಬ್ಬರನ್ನು ಭೇಟಿಯಾಗಿ ಹರಟೆ ಹೊಡೆಯೋದು ಇರುವುದಿಲ್ಲ. ಇನ್ಮುಂದೆ ನಾನು ಕೇವಲ ನನ್ನ ಸಿನಿಮಾ, ಟಿವಿ ಶೋಗಳಿಗೆ ಮೀಸಲಾಗಿರುತ್ತೇನೆ. ಏಕೆಂದರೆ ನಮ್ಮ ಚಿತ್ರರಂಗ ತುಂಬಾ ತಾಮಸವಾಗಿದೆ. ದೊಡ್ಡವರು ಬದುಕಿದ್ದಾಗಲೇ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ನಡೀತಿದೆ.
- ಇದು ನಟ ದರ್ಶನ್ ಅಭಿಮಾನಿಗಳ ತರಾಟೆಯಿಂದ ಬೇಸರಗೊಂಡಿರುವ ಹಿರಿಯ ನಟ ಜಗ್ಗೇಶ್ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರಹಾಕಿ ರೀತಿ.
ನಿನ್ನೆ ಜಗ್ಗೇಶ್ ತೋತಾಪೂರಿ ಸಿನಿಮಾ ಶೂಟಿಂಗ್ ಮೈಸೂರಿನ ಟಿ ನರಸೀಪುರ ಬಳಿ ನಡೆಯುತ್ತಿತ್ತು. ಈ ವೇಳೆ ಏಕಾಏಕಿ ದರ್ಶನ್ ಅಭಿಮಾನಿಗಳ ಸೆಟ್ ನುಗ್ಗಿ ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ಬಗ್ಗೆ ಜಗ್ಗೇಶ್ ಅವಮಾನ ಮಾಡಿ ಮಾತನಾಡಿದ್ದಾರೆ ಎಂಬ ಆಡಿಯೋ ವೈರಲ್ ಆಗಿತ್ತು. ಈ ವೈರಲ್ ವಿಡಿಯೋ ಕುರಿತಂತೆ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅದ್ಹೇಗೆ ನೀವು ಅವಾಚ್ಯ ಶಬ್ದಗಳಿಂದ ನಮ್ಮ ಬಾಸ್ ಬಗ್ಗೆ ಮಾತನಾಡಿದಿರಿ ಎಂದು ಪ್ರಶ್ನೆ ಮಾಡಿ, ದರ್ಶನ್ ಅವರಿಗೆ ಜಯಕಾರ ಕೂಗಿದರು.
ಈ ಹಿಂದೆಯೂ ವೈರಲ್ ಆಡಿಯೋ ಕ್ಲಿಪ್ ಕುರಿತಂತೆ ದರ್ಶನ್ ಅಭಿಮಾನಿ ಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದರು.