1,500 ಟನ್ ಆಕ್ಸಿಜನ್ ಗೆ ಕೇಂದ್ರಕ್ಕೆ ಮನವಿ:ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Team Newsnap
2 Min Read
  • ಹಾಸಿಗೆ ಬಗ್ಗೆ ವೆಬ್ ಪೋರ್ಟಲ್ ನಲ್ಲೇ ಮಾಹಿತಿ

ರಾಜ್ಯಕ್ಕೆ ಪ್ರತಿ ದಿನ 1,500 ಮೆಟ್ರಿಕ್ ಟನ್ ಆಕ್ಸಿಜನ್ ನಿಗದಿಪಡಿಸಿ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೋರಿದ್ದಾರೆ. ನಾನು ಕೂಡ ಈ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಿದ್ದೇನೆ, ಕೇಂದ್ರ ಸರ್ಕಾರ ಇದಕ್ಕೆ ಸ್ಪಂದಿಸಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ರಾಜ್ಯದ ಕೋವಿಡ್ ಸ್ಥಿತಿಗತಿ ಹಾಗೂ ರಾಜ್ಯ ಸರ್ಕಾರದಿಂದ ಕೈಗೊಂಡ ಕ್ರಮಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಸಚಿವರು ವಿವರ ನೀಡಿದರು.

ರಾಜ್ಯಕ್ಕೆ ದಿನಕ್ಕೆ 300 ಟನ್ ಆಕ್ಸಿಜನ್ ನಿಗದಿಪಡಿಸಲಾಗಿದೆ. ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಈ ತಿಂಗಳ ಕೊನೆಗೆ 500-600 ಟನ್ ಆಕ್ಸಿಜನ್ ಬೇಕಾಗುತ್ತದೆ. ಮುಂದಿನ ತಿಂಗಳ ಕೊನೆಗೆ 1,500 ಟನ್ ಆಕ್ಸಿಜನ್ ಬೇಕಾಗುತ್ತದೆ. ಇಷ್ಟು ಪ್ರಮಾಣದ ಆಕ್ಸಿಜನ್ ನೀಡಬೇಕೆಂದು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದರು.

ಕೊರೊನಾ ಪಾಸಿಟಿವ್ ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗುವ ಮಟ್ಟಿಗೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಶೇ.90 ರಷ್ಟು ರೋಗಿಗಳಿಗೆ ಆಸ್ಪತ್ರೆ ಅಗತ್ಯವಿಲ್ಲ. ಮನೆಯಲ್ಲೇ ಇದ್ದು ಚಿಕಿತ್ಸೆ ಮಾಡಿಕೊಳ್ಳಬಹುದು. ನಮ್ಮ ವೈದ್ಯರು ಮನೆಗೆ ಭೇಟಿ ನೀಡುವ, ರೋಗಿಗಳ ಆರೋಗ್ಯದ ಮೇಲೆ ನಿಗಾ ಇರಿಸುವ ಕೆಲಸ ಮಾಡುತ್ತಾರೆ. ಯಾವುದನ್ನು ಮಾಡಬೇಕು ಹಾಗೂ ಮಾಡಬಾರದು ಎಂಬ ಬಗ್ಗೆ ಹೆಚ್ಚು ಪ್ರಚಾರ ಮಾಡಲಾಗುವುದು ಎಂದರು.

ಕಡಿಮೆ ರೋಗ ಲಕ್ಷಣವಿದ್ದರೆ ಹೋಟೆಲ್ ಗಳಲ್ಲಿ ರೂಪಿಸಿದ ಪರ್ಯಾಯ ಆಸ್ಪತ್ರೆಗೆ ಸೇರಬಹುದು. ಸಣ್ಣ ಲಕ್ಷಣವಿರುವವರು ಆಸ್ಪತ್ರೆಗೆ ದಾಖಲಾದರೆ, ಚಿಕಿತ್ಸೆ ಅಗತ್ಯವಿರುವ ರೋಗಿಯ ಹಾಸಿಗೆ ಕಿತ್ತುಕೊಂಡಂತಾಗುತ್ತದೆ. ಅಂತಹ ತೀವ್ರ ರೋಗಿಗಳಿಗೆ ಆಕ್ಸಿಜನ್, ವೆಂಟಿಲೇಟರ್ ದೊರೆಯುವಂತೆ ಮಾಡಬೇಕಿದೆ

ಹಾಸಿಗೆ ಮೀಸಲು

ಬೆಂಗಳೂರಿನಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು 4 ಸಾವಿರ ಹಾಸಿಗೆ ಕೋವಿಡ್ ಗೆ ನೀಡಿವೆ. ಸರ್ಕಾರಿ ಮೆಡಿಕಲ್ ಕಾಲೇಜುಗಳು 1 ಸಾವಿರ ಹಾಸಿಗೆ, ಸರ್ಕಾರಿ ಆಸ್ಪತ್ರೆಗಳು 1,409 ಹಾಗೂ ಖಾಸಗಿ ಆಸ್ಪತ್ರೆಗಳು 7,442 ಹಾಸಿಗೆಯನ್ನು ಕೋವಿಡ್ ಗೆ ಮೀಸಲಿಟ್ಟಿವೆ. ಈ ಕುರಿತು ವೆಬ್ ಪೋರ್ಟಲ್ ನಲ್ಲೇ ಮಾಹಿತಿ ಲಭ್ಯವಿದೆ. ಈ ವ್ಯವಸ್ಥೆಯನ್ನು ರಾಜ್ಯದ ಮಟ್ಟದಲ್ಲಿ ಜಾರಿ ಮಾಡಲಾಗುತ್ತಿದೆ ಎಂದರು.

ಇತರೆ ಅಂಶಗಳು
  • ಯುವಜನರು ತಮ್ಮ ಕುಟುಂಬದ ಹಿರಿಯರಿಗೆ ಲಸಿಕೆ ನೀಡಿ ಜವಾಬ್ದಾರಿ ಮೆರೆಯಬೇಕು. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಿರಿ.
  • ದೇಶದಲ್ಲಿ 12.7 ಕೋಟಿ ಲಸಿಕೆ ಡೋಸ್ ನೀಡಲಾಗಿದೆ. ಈ ಪೈಕಿ 99.96% ಜನರಿಗೆ ಕೊರೊನಾ ಸೋಂಕು ಬಂದಿಲ್ಲ.
  • ಸಾವಿನ ಪ್ರಮಾಣದ ಬಗ್ಗೆ ಆತಂಕ ಬೇಡ.
  • ವೆಂಟಿಲೇಟರ್ ಗಳನ್ನು ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆಗಳಿಗೆ ನೀಡಲಾಗಿದೆ.

Share This Article
Leave a comment