ಶಿರಸಿ-ಕುಮಟಾ ರಸ್ತೆಗೆ 10,000 ಮರಗಳ ಬಲಿ

Team Newsnap
1 Min Read

ಶಿರಸಿ-ಕುಮಟಾದ 36 ಕಿಲೋಮೀಟರ್ ವ್ಯಾಪ್ತಿಯ ರಸ್ತೆಯ ಮೇಲ್ದರ್ಜೆ ಯೋಜನೆಗೆ 10,000 ಮರಗಳನ್ನು ಉರುಳಿಸಲು ಕೇಂದ್ರ ಪರಿಸರ ಸಚಿವಾಲಯ ಅನುಮತಿ‌ ನೀಡಿದ್ದು, ಶಿರ್ಸಿಯ ನಿಲೇಕಣಿ ಕ್ರಾಸ್‌ನಿಂದ ದೇವಿಮನೆ ಘಟ್ಟದವರೆಗೆ ರಸ್ತೆಯ ಅಕ್ಕಪಕ್ಕ ಕತ್ತರಿಸಬೇಕಾದ ಮರಗಳಿಗೆ ಈಗ ಗುರುತು ಮಾಡಲಾಗಿದೆ.

ನಿಲೇಕಣಿ ಕ್ರಾಸ್‌ನಿಂದ ಹನುಮಂತಿಯವರೆಗೆ 5,700 ಮರಗಳು ಮತ್ತು ಹನುಮಂತಿಯಿಂದ ದೇವಿಮನೆ ಘಟ್ಟದವರೆಗೆ 4,000 ಮರಗಳನ್ನು ಕತ್ತರಿಸುವ ಕಾರ್ಯಾಚರಣೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಚಾಲನೆ ನೀಡಿದೆ.

ವರ್ಷಂ ಪ್ರತೀ ಯಾವುದೋ ಯೋಜನೆಗೋಸ್ಕರ ಪಶ್ಚಿಮಘಟ್ಟದ ಸಾವಿರಾರು ಮರಗಳನ್ನು ಸರ್ಕಾರ ಉರುಳಿಸುತ್ತಲೇ ಬರುತ್ತಿದೆ. ಆದರೆ ಅಲ್ಲಿ ನಾಶವಾಗುವ ಮೌಲ್ಯಾತೀತವಾದ ಮರಗಳ ಬಗ್ಗೆ ಸರ್ಕಾರದ ಗಮನವಿಲ್ಲದಂತೆ ವರ್ತನೆ ನಡೆಸಿದೆ. ಕತ್ತರಿಸಲು ಗುರುತು ಹಾಕಿರುವ ಮರಗಳು 30 ಸೆಂ.ಮೀ.ನಿಂದ ಹಿಡಿದು 60 ಸೆಂ.ಮೀ., 61- 90 ಸೆಂ.ಮೀ., 91- 120 ಸೆಂ.ಮೀ., 121- 150 ಸೆಂ.ಮೀ. ಹಾಗೂ 150 ಸೆಂ.ಮೀ. ಸುತ್ತಳತೆಯನ್ನು ಹೊಂದಿವೆ.

ಕತ್ತರಿಸಲು ಯೋಜಿಸಿರುವ ಮರಗಳಲ್ಲಿ ತೇಗ, ಮತ್ತಿ, ಹೊನಲು, ಹೊನ್ನೆ, ಅರಳಿ, ಹಾಲ, ಕೆಸಳಾ, ಕೆಂದಾಳ, ಮಾವು, ಗೇರು, ಹಲಸು, ಕಾಸರಕಾ, ನಂದಿ, ನೆಲ್ಲಿ, ಕವಲು, ಕಾಡಮಟೆ, ಜಂಗ್ಲಿ, ದೂಪಾ, ಚಂದಕಲಾ, ಉಪ್ಪಾಗೆ, ಹುಣಸೆ, ಹೊಂಗೆ, ಹಲಗಾ ಹೀಗೆ ನೂರಕ್ಕು ಹೆಚ್ಚು ಜಾತಿಯ ಮರಗಳು ನೆಲಕ್ಕುರಳಲಿವೆ.

ರಸ್ತೆಯನ್ನು ಮೇಲ್ದರ್ಜೆಗೇರಿಸಲು ಇಂತಹ ಮರಗಳನ್ನು ಧರೆಗುರುಳಿಸುವುದು ಅವಶ್ಯಕವೇ?

Share This Article
Leave a comment